ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಗೆ ಹೋಗಲು ಪಶ್ಚಿಮ ಬಂಗಾಳದಿಂದ ಮುಸ್ಲಿಮ್ ಲೀಗ್ ಮೂಲಕ ಮುಸ್ಲಿಮರು ಬೆಂಬಲಿಸಿ ಗೆಲ್ಲಿಸಿದ್ದರು ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭ್ರಾತೃತ್ವ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಎಲ್ಲ ಜಾತಿ-ಜನಾಂಗದವರಿಗೆ ಅನುಕೂಲವಾಗುವಂತೆ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಎಲ್ಲಾ ಜನಾಂಗದವರು ಒಗ್ಗಟ್ಟಾಗಿ ಸಂವಿಧಾನವನ್ನು ಉಳಿಸಿಕೊಳ್ಳುವಂತೆ ಅವರು ಕೋರಿದರು.
ಭ್ರಾತೃತ್ವ ಸಮಿತಿಯ ಸಂಸ್ಥಾಪಕ, ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ, ಆಗ ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದರೆ, ಡಾ. ಬಿ.ಆರ್. ಅಂಬೇಡ್ಕರ್ ಮಹಿಳೆಯನ್ನು ಲೋಕಸಭೆಗೆ ಕಳುಹಿಸಿದರು ಎಂದು ನುಡಿದರು.
ದಲಿತ ಸಂಘರ್ಷ ಸಮಿತಿ (ಭೀಮಾ ವಾದ) ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಚೌಡಕಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ಅತ್ಯುತ್ತಮ ಸಂವಿಧಾನವನ್ನು ರಚಿಸಿದ್ದಾರೆ. ಎಲ್ಲಾ ಸಮಾಜದವರು, ನಾಯಕರು, ಯುವಕರು, ಅಕ್ಕ-ತಂಗಿಯರು ಕೂಡಿ ಡಾ. ಅಂಬೇಡ್ಕರ್ ಅವರ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ, ಭ್ರಾತೃತ್ವ ಸಮಿತಿಯ ಮುಖಂಡ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿದರು. ಭ್ರಾತೃತ್ವ ಸಮಿತಿಯ ಕಾರ್ಯಕರ್ತ ಸುಂಕಪ್ಪ ಮೀಸಿ, ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಗೌಸ್ ನೀಲಿ, ಗವಿಸಿದ್ದಪ್ಪ ಹಲಗಿ, ಗಾಳೆಪ್ಪ ಮುಂತಾದವರು ಭಾಗವಹಿಸಿದ್ದರು.