ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದೂತ ಭಗವಾನ್ ಬುದ್ಧರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಮಂತ್ರದ ಬೀಜ ಬಿತ್ತಬೇಕು ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಭಗವಾನ್ ಬುದ್ಧ ಜಯಂತಿ ಸಮಾರಂಭದಲ್ಲಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪ ಸಮರ್ಪಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ದುಃಖ ನಿವಾರಣೆಗಾಗಿ ಅಷ್ಟಾಂಗ ಮಾರ್ಗಗಳನ್ನು ಭಗವಾನ್ ಬುದ್ಧರು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಆಧ್ಯಾತ್ಮಿಕ ಜೀವನ ನಡೆಸಲು ಹಾಗೂ ಶಾಂತಿಯುತ ಜೀವನ ನಿರ್ವಹಣೆಗಾಗಿ ಹಿಂಸೆ ಮಾಡದಂತೆ ಭಗವಾನ್ ಬುದ್ಧರು ಉಪದೇಶಿಸಿದ್ದಾರೆ. ಭಗವಾನ್ ಬುದ್ಧರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯಿದೆ ಎಂದು ಅವರು ತಿಳಿಸಿದರು.
ಸರ್ಕಾರದಿಂದ ಪ್ರಥಮ ಬಾರಿಗೆ ಭಗವಾನ್ ಬುದ್ಧ ಜಯಂತಿ ಆಚರಿಸುವ ಮೂಲಕ ಬುದ್ಧರ ಆಚಾರ-ವಿಚಾರ, ಸಂದೇಶಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಇದು ನಿತ್ಯ ನಿತಂತರ ಸಾಗಲಿದೆ ಎಂದು ಅನ್ನಪೂರ್ಣ ಎಂ ಹೇಳಿದರು.
ಇದೇ ಸಂದರ್ಭದಲ್ಲಿ ಭಗವಾನ್ ಬುದ್ಧರ ವಂದನೆಯನ್ನು ಪಠಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ತಹಸೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ಸಮಾಜದ ಗಣ್ಯರು, ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪಂಡಿತ ವೆಂಕಟೇಶ ಅಲ್ಕೋಡ್ ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ವಂದಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವೆಂಕಟೇಶಯ್ಯ ವಿಶೇಷ ಉಪನ್ಯಾಸ ನೀಡಿ, ಭಗವಾನ್ ಬುದ್ಧರ ಜಯಂತಿಯನ್ನು ಹಮ್ಮಿಕೊಂಡಿರುವುದು ಅಭಿನಂದನಾರ್ಹವಾಗಿದೆ. ವಿಶ್ವಕ್ಕೆ ಭಗವಾನ್ ಬುದ್ಧರು ಶಾಂತಿ ಮಂತ್ರ ಸಾರಿದ್ದಾರೆ. ಸಮಾಜದಲ್ಲಿನ ದ್ವೇಷ, ಅಸೂಯೆ ಸಮಾಜಘಾತುಕ ವಿಚಾರಗಳಿಂದ ಹೊರಬಂದು ಶಾಂತಿಯುತ ಬದುಕನ್ನು ನಡೆಸಬೇಕು. ಮತ್ತೊಬ್ಬರ ಆಸ್ತಿ ಅಪಹರಿಸುವುದು, ಮತ್ತೊಬ್ಬರ ಮನಸ್ಸಿಗೆ ನೋವು ಉಂಟುಮಾಡುವುದನ್ನು ತ್ಯಜಿಸಬೇಕಲ್ಲದೇ ಮತ್ತೇರಿಸುವ ವಸ್ತುಗಳನ್ನು ತ್ಯಜಿಸಿ ಗೌರವದಿಂದ ಮೌಲ್ಯಯುತ ಜೀವನ ಸಾಗಿಸಬೇಕೆಂದು ಭಗವಾನ್ ಬುದ್ಧರು ಸಮಾಜಕ್ಕೆ ಸಂದೇಶ ಸಾರಿದ್ದಾರೆ ಎಂದರು.