ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಜನರಿಗೆ ಆರ್ಥಿಕವಾಗಿ ಹೆಚ್ಚು ಸಹಾಯಕವಾಗಿರುವ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಎಲ್ಲೆಡೆ ನಡೆಯುತ್ತಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬೇಸಿಗೆ ಕಾಲದಲ್ಲಿ ಮೇ 1ರಿಂದ ಜೂನ್ ಅಂತ್ಯದವರೆಗೆ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ `ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಾಲೂಕಿನ ಗೋಜನೂರು, ಸೂರಣಗಿ, ರಾಮಗಿರಿ, ಬಟ್ಟೂರು, ದೊಡ್ಡರೂ,ಹುಲ್ಲೂರು, ಮಾಡಳ್ಳಿ, ಪು. ಬಡ್ನಿ, ಬಾಲೆಹೊಸೂರು, ಆದರಹಳ್ಳಿ, ಅಡರಕಟ್ಟಿ, ಗೋವನಾಳ, ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಡಿ ಸಾಮೂಹಿಕ ಕಂದಕ ಬದು ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ಮೇ 1ರಿಂದ ಜೂನ್ 30ರವರೆಗೆ ದುಡಿಯೋಣ ಬಾ ಅಭಿಯಾನದ ಮೂಲಕ ಗ್ರಾಮೀಣ ಜನರಿಗೆ ಆರ್ಥಿಕ ಸದೃಢತೆಗಾಗಿ ನರೇಗಾದಡಿ ಕೆಲಸ ನೀಡಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ತಿಳಿಸಿದರು.
ನರೇಗಾದಡಿ ಪಾಲ್ಗೊಳ್ಳದೆ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಉದ್ಯೋಗ ಚೀಟಿ ವಿತರಿಸಲಾಗುವುದು. ನರೇಗಾ ಯೋಜನೆಯ ಕುರಿತು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಅರಿವು ಮೂಡಿಸುವ ಮತ್ತು ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದ ಸ್ತ್ರೀ ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದುರ್ಬಲ ಕುಟುಂಬಗಳನ್ನು ಗುರುತಿಸಿ ಯೋಜನೆಯ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಥಮ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.