ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಡಿಯಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರದ ತನಿಖೆ ನಡೆಸಬೇಕು ಹಾಗೂ ಸ್ಲಂ ಬೋರ್ಡ್ ಅಧಿಕಾರಿಯ ಅಮಾನತು ಮಾಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯ ಸಹಕಾರದಲ್ಲಿ ನೂರಾರು ಸ್ಲಂ ನಿವಾಸಿಗಳಿಂದ ಬಹಿರಂಗ ಪತ್ರ ಚಳುವಳಿ ನಡೆಸಿ ರಾಜ್ಯ ವಸತಿ ಇಲಾಖೆ ಸಚಿವ ಬಿ.ಝಡ್. ಜಮೀರಅಹ್ಮದ ಖಾನ ಅವರಿಗೆ ಒತ್ತಾಯಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಸ್ಲಂ ಜನರ ಹಣದಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ವಿವಿಧ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ ಪ್ರಕಾರ ಘೋಷಣೆ ಮಾಡಲು ಸ್ಲಂ ಬೋರ್ಡ್ ಕಚೇರಿಗೆ ಸ್ಲಂ ನಿವಾಸಿಗಳ ದಾಖಲೆಗಳನ್ನು ಸಲ್ಲಿಸಿ ಎರಡು ವರ್ಷಗಳು ಕಳೆದರೂ ಸಹ ಈವರೆಗೊ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗುಡಿಸಲು ಪ್ರದೇಶಗಳನ್ನು ಸ್ಲಂ ಘೋಷಣೆ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕಾದ ಅಧಿಕಾರಿಗಳು ಕೊಳಗೇರಿ ಜನರ ಸಮಸ್ಯಗಳಿಗೆ ಸ್ಪಂದಿಸುವುದನ್ನು ಬಿಟ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಗದಗ ಜಿಲ್ಲಾ ಸ್ಲಂ ಸಮಿತಿ ಇಂತಹ ಭ್ರಷ್ಟ ಹಾಗೂ ಸ್ಲಂ ಜನರ ವಿರೋಧಿ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ನಿರಂತರ ಹೋರಾಟಗಳು ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ವಸತಿ ಸಚಿವರಿಗೆ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಸ್ಲಂ ಬೋರ್ಡ್ ಆಯುಕ್ತರಿಗೆ ಸಾಮೂಹಿಕವಾಗಿ ಪತ್ರ ಕಳುಹಿಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಮ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೌಲಾಸಾಬ ಗಚ್ಚಿ, ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಮೈಮುನ ಬೈರಕದಾರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಮಲೇಶಪ್ಪ ಕಲಾಲ, ಮೆಹರುನಿಸಾ ಡಂಬಳ, ಚಂದ್ರಪ್ಪ ಲಕ್ಕುಂಡಿ, ಜಂದಿಸಾಬ ಬಳ್ಳಾರಿ, ದುರ್ಗಪ್ಪ ಮಣವಡ್ಡರ, ಶರಣಪ್ಪ ಬಿಂಗದಕಟ್ಟಿ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ಶಿವಾನಂದ ಶಿಗ್ಲಿ, ರಾಜೇಸಾಬ ಸೈಯದ, ಮಂಜುನಾಥ ಒಂಟಿಯಲಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಪತ್ರ ಚಳುವಳಿಯಲ್ಲಿ ಭಾಗವಹಿಸಿದರು.