ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀರಾಮನ ಚರಿತ್ರೆಯನ್ನು ಜಗತ್ತಿಗೆ ತೋರಿಸುವ ಪಣತೊಟ್ಟು ಕಾವ್ಯರೂಪದಲ್ಲಿ ರಾಮಾಯಣವನ್ನು ಪರಿಚಯಿಸಿದವರು ಶ್ರೀ ಮಹರ್ಷಿ ವಾಲ್ಮೀಕಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಬಣ್ಣಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಗದಗ-ಬೆಟಗೇರಿ ಇವರುಗಳ ಸಹಯೋಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕಾವ್ಯದಲ್ಲಿ ಶ್ರೀರಾಮನ ಸಂಪೂರ್ಣ ಜೀವನ ಚಿತ್ರವನ್ನು ನಮಗೆಲ್ಲ ಅರಿಯುವಂತೆ ಕಟ್ಟಿಕೊಟ್ಟಿದ್ದಾರೆ. ಅಲ್ಲದೆ, ಶ್ರೀರಾಮನ ಆದರ್ಶ ಜೀವನ ಹಾಗೂ ಯಶಸ್ಸಿನ ಕುರಿತು ತಿಳಿಸಿದ್ದಾರೆ. ಶ್ರೀರಾಮನ ಜೀವನದ ತತ್ವಾದರ್ಶನಗಳನ್ನು ಸುಂದರವಾಗಿ ರಚನೆ ಮಾಡುವುದು ಸುಲಭದ ಮಾತಲ್ಲ. ನಾವುಗಳೆಲ್ಲ ಆದರ್ಶದ ಬೆನ್ನತ್ತಬೇಕು. ಅವುಗಳ ಪಾಲನೆಯಿಂದ ನಮ್ಮ ಜೀವನ ಸುಂದರವಾಗುತ್ತದೆ ಎಂದರು.
ಶಿಕ್ಷಕ ವಿರೇಶ ವಾಲ್ಮೀಕಿ ಉಪನ್ಯಾಸ ನೀಡುತ್ತಾ, ಸರ್ಕಾರ ಕಳೆದ 16 ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುತ್ತಿರುವುದು ಸಂತಸದ ವಿಷಯ. ಮನುಕುಲದ ಒಳಿತಿಗಾಗಿ ಹಲವು ಗ್ರಂಥ ಕಾವ್ಯಗಳು ಹೊರಬಂದಿವೆ. ಅವುಗಳಲ್ಲಿ ವಿಶೇಷ ಸ್ಥಾನ ಪಡೆಯಲು ಮನುಷ್ಯನ ಜೀವನ ಉತ್ಸಾಹ ಅಧಿಕಗೊಳಿಸಲು ಸಹಕಾರಿಯಾಗಿದೆ. ಇವುಗಳಲ್ಲಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಅಗ್ರ ಪಂಕ್ತಿಯಲ್ಲಿದೆ ಎಂದು ಹೇಳಿದರು.
ರಾಮಾಯಣವು ಏಳು ಮಹಾ ಖಂಡಗಳು ಹಾಗೂ 24,000 ಶ್ಲೋಕಗಳನ್ನು ಒಳಗೊಂಡ ಮಹಾಕಾವ್ಯವಾಗಿದೆ. ವಾಲ್ಮೀಕಿ ಅವರ ರಾಮಾಯಣವು ಐತಿಹಾಸಿಕ, ಚಾರಿತ್ರಿಕ ಮಹಾಕಾವ್ಯವೆಂದು ಬಣ್ಣಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಮರಟ್ಟಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ಸಿಂದೂರ ಅವರು ವಾಲ್ಮೀಕಿ ಅವರ ಕುರಿತು ಸಂಗ್ರಹಿಸಿ ರಚಿಸಿದ ಗ್ರಂಥವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪ ವಿಭಾಗಾಧಿಕಾರಿ ಗಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ್ ಬಳ್ಳಾರಿ ಸೇರಿದಂತೆ ನಗರಸಭೆಯ ಸದಸ್ಯರು, ಸಮಾಜದ ಮುಖಂಡರು, ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಅವರು ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಶುಭಾಶಯಗಳನ್ನು ತಿಳಿಸಿದರು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರ ಅನುಪಸ್ಥಿತಿಯಲ್ಲಿ ಸಚಿವರ ವಾಲ್ಮೀಕಿ ಜಯಂತಿಯ ಸಂದೇಶವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ವಾಚಿಸಿದರು.