ಬೆಂಗಳೂರು:- ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಇಂದು ತೀರ್ಪು ಪ್ರಕಟಿಸಿದೆ.
ಎಸ್, ಮನೆಗೆಲಸದ ಮಹಿಳೆ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯ ನಿನ್ನೆ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಕಾದಿರಿಸಿತ್ತು. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದರು. ಇಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಪ್ರಕಟ ಮಾಡಿದೆ. ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆ ಜೊತೆಗೆ ಸಂತ್ರಸ್ತೆಗೆ ಪರಿಹಾರವಾಗಿ 7 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. 5 ಲಕ್ಷ ರೂಪಾಯಿ ದಂಡವನ್ನು ಕಟ್ಟಬೇಕಾಗಿದೆ. ಸದ್ಯ, ಪ್ರಜ್ವಲ್ ರೇವಣ್ಣ ಮುಂದಿರುವ ಕಾನೂನು ಹೋರಾಟಗಳೇನು ಎಂಬ ಪ್ರಶ್ನೆ ಹಲವರಲ್ಲಿ ಕಾಡಲು ಆರಂಭವಾಗಿದೆ. ಹಾಗಿದ್ರೆ, ಜೈಲು ಶಿಕ್ಷೆಯ ಬಳಿಕ ಅವರು ಹೊರಬರಲು ಏನೆಲ್ಲಾ ಕಾನೂನು ಹೋರಾಟ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
ಸದ್ಯ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಅನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು. ಹೈಕೋರ್ಟ್ನಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ರದ್ದು ಪಡಿಸಲು ಮನವಿ ಮಾಡಿಕೊಳ್ಳಬಹುದು. ಮೇಲ್ಮನವಿ ವಿಚಾರಣೆ ಹೈಕೋರ್ಟ್ನಲ್ಲಿ ಮುಗಿಯುವವರೆಗೂ ಈಗ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಿ, ಶಿಕ್ಷೆ ಅಮಾನತ್ತಿನಲ್ಲಿ ಇಡಬಹುದು. ಒಂದು ವೇಳೆ ವಿಶೇಷ ಕೋರ್ಟ್ ತೀರ್ಪುಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ರೆ ಪ್ರಜ್ವಲ್ ರೇವಣ್ಣಗೆ ರಿಲೀಫ್ ಸಿಕ್ಕಂತೆ ಆಗುತ್ತದೆ.
ಆದರೆ ಇನ್ನೂ ಬಾಕಿ ಇರುವ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಇರಬೇಕಾಗುತ್ತದೆ. ಈ ಮೂರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತೀರ್ಪು ಬಂದು, ನಿರಪರಾಧಿಯಾದ್ರೆ ಮಾತ್ರ ಪ್ರಜ್ವಲ್ ರೇವಣ್ಣಗೆ ರಿಲೀಫ್ ಇರುತ್ತದೆ. ಒಂದು ವೇಳೆ ಒಂದು ಪ್ರಕರಣದಲ್ಲಿ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್, ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ, ಪ್ರಜ್ವಲ್ ರೇವಣ್ಣಗೆ ಜೈಲುವಾಸ ಮುಂದುವರೆಯುತ್ತದೆ.
ಇಂತಹ ಕೇಸ್ಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ವರೆಗೂ ಹೋಗಿ ಕಾನೂನು ಹೋರಾಟ ನಡೆಸುವ ಅವಕಾಶ ಪ್ರಜ್ವಲ್ ರೇವಣ್ಣಗೆ ಇದೆ. ಇಲ್ಲಿ ರಿಲೀಫ್ ಸಿಕ್ಕರಷ್ಟೇ ಪ್ರಜ್ವಲ್ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತದೆ. ರಿಲೀಫ್ ಸಿಗದಿದ್ರೆ, ಜೀವನಪರ್ಯಾಂತ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇರಲಿದೆ.