ಬದುಕು ಶೃತಿಗೊಳಿಸಿದ ವೀಣೆಯಂತಾಗಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಂತಿ ತಾಳದ ಹಿಂದೆ ಜೀವನದ ಪರಮ ರಹಸ್ಯವಿದೆ. ಸಂಗೀತಕ್ಕೆ ರೋಗ ನಿವಾರಿಸುವ ಅದ್ಭುತ ಶಕ್ತಿ ಇದೆ. ಸಂಗೀತ ಸಾಧನೆಗೆ ಸಾಮರ್ಥ್ಯ ಬರುವದು ತಪಸ್ಸು ಇದ್ದಾಗ. ಬದುಕು ಶೃತಿಗೊಳಿಸಿದ ವೀಣೆಯಂತಾಗಬೇಕು ಎಂದು ಗದಗ ಶಿವಾನಂದ ಬ್ರಹನ್ಮಠದ ಪೂಜ್ಯ ಜ.ಸದಾಶಿವಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

Advertisement

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಶ್ರೀಮಠದ ಕೃಪಾಶ್ರಯದಲ್ಲಿ ಶ್ರೀಗುರು ಪಂಚಾಕ್ಷರಿ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗಿದ 333ನೇ ಶಿವಾನುಭವ, ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ, ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಸಿರುಕ್ರಾಂತಿಯ ಹೆಸರಿನಲ್ಲಿ ಹದ ಮತ್ತು ಫಲವತ್ತಾದ ಭೂಮಿಗೆ ರಾಸಾಯನಿಕ ಹಾಕಿ ಆ ಭೂಮಿಯ ಬೆಳೆಯ ಅನ್ನವನ್ನುಂಡು ಮಾನವನ ಶರೀರವು ರೋಗದ ಆಲಯವಾಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಆಹಾರಕ್ಕಾಗಿ ಪರಿತಪಿಸಬೇಕಾದೀತು ಎಂದರು.

ಅಡುಗೆ ಮನೆಯಲ್ಲಿ ಮಸಾಲೆ ಸಾಮಗ್ರಿಗಳ ಡಬ್ಬಗಳು ಔಷಧ ಮಾತ್ರೆಯ ಡಬ್ಬಗಳಾಗಿ ಪರಿವರ್ತನೆಗೊಂಡಿವೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯ ಮದ್ದು ಆಗಬೇಕಿದ್ದ ಅಡುಗೆ ಮನೆ ಔಷಧಾಲಯ ಆಗುತ್ತಿದೆ. ಆದ್ದರಿಂದ ಭೂಮಿಯ ಫಲವತ್ತತೆ ಕಾಯ್ದುಕೊಂಡಲ್ಲಿ ಸದೃಢ ಆರೋಗ್ಯ ಕಾಯ್ದುಕೊಳ್ಳಲು, ಪೌಷ್ಠಿಕ ಆಹಾರ ಲಭ್ಯವಾಗಲು ಸಾಧ್ಯ. ನೆಮ್ಮದಿಯ ಬದುಕಿಗೆ ಆಹ್ಲಾದಕರ ಸಂಗೀತ ಅವಶ್ಯವೆಂದರು.

ನೇತೃತ್ವ ವಹಿಸಿದ್ದ ಹರ್ಲಾಪೂರದ ಕೊಟ್ಟೂರೇಶ್ವರ ಮಠದ ಪೂಜ್ಯ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಸಂಗೀತ ಆತ್ಮಸಂತೃಪ್ತಿ ಭಾವವನ್ನು ಸ್ಪುರಿಸುವದು. ಭಾವ ತುಂಬಿ ಹಾಡುವ ಗಾಯಕನಿಗೂ, ಕೇಳುಗನಿಗೂ ಹೆಚ್ಚು ತೃಪ್ತಿ ನೀಡುವ ಶಕ್ತಿ ಸಂಗೀತಕ್ಕಿದೆ. ಬದುಕಿನ ಬವಣೆ ಕಳೆಯುವ ಅದ್ಭುತ ತಾಕತ್ತು ಸಂಗೀತ ಕಲೆಗೆ ಇದೆ. ನಾಡಿನ ಅಂಧ, ಅನಾಥ, ಅಂಗವಿಕಲರ ಬದುಕಿಗೆ ಪಂಚಾಕ್ಷರ ಪುಟ್ಟರಾಜ ಗವಾಯಿಗಳು ಬೆಳಕಾದವರು. ಭೀಕ್ಷೆಯ ಪಾತ್ರೆ ಹಿಡಿದವರಿಗೆ ಅಕ್ಷಯ ಪಾತ್ರೆ ನೀಡಿದ ಪುಣ್ಯಾತ್ಮರಾಗಿದ್ದಾರೆ ಎಂದು ಬಣ್ಣಿಸಿದರು.

ಸಮ್ಮುಖವನ್ನು ಅಡವೀಂದ್ರ ಮಠದ ಧರ್ಮದರ್ಶಿ ವೇ.ಮಹೇಶ್ವರಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿ ಅಧ್ಯಕ್ಷ ಪಂ.ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಸಂದರ್ಭೋಚಿತವಾಗಿ ಮಾತನಾಡಿದರು. ಉದ್ಘಾಟನೆಯನ್ನು ರಾಣಿ ಚನ್ನಮ್ಮ ಕೋ.ಆ ಬ್ಯಾಂಕ್ ಅಧ್ಯಕ್ಷ ಡಾ. ಎಸ್.ಕೆ. ಮ್ಯಾಗೇರಿ ನೆರವೇರಿಸಿ ಮಾತನಾಡಿದರು.

`ಆರೋಗ್ಯದ ಮೂಲ ಸಂಗೀತ’ ವಿಷಯವಾಗಿ ಡಾ.ಮಹಾಂತೇಶ ಸಜ್ಜನ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಶಿವಾನುಭವ ಸಮಿತಿಯ ಡಾ. ಎಸ್.ಕೆ. ನಾಲತ್ವಾಡಮಠ, ಸರಸ್ವತಿ ಸಜ್ಜನ ಆಗಮಿಸಿದ್ದರು. ಪ್ರಸಾದ ಸೇವೆಯನ್ನು ಎಸ್.ಆರ್. ನಾಲತ್ವಾಡಮಠ, ಮೀನಾಕ್ಷಿ ಬೆನಕಣ್ಣವರ, ಶ್ರೀಶೈಲ ಗದಗಿನಮಠ, ರಾಚಪ್ಪ ಕಾಳಗಿ ವಹಿಸಿಕೊಂಡಿದ್ದರು.

ಕಲಾವಿದರಾದ ಮಲ್ಲಿಕಾರ್ಜುನ ಭಜಂತ್ರಿ, ಶ್ಯಾಮರಾವ್ ಪುಲಾರಿ, ವೀರುಪಾಕ್ಷಯ್ಯ ಹೊಸಳ್ಳಿಮಠ, ಬಸವರಾಜ ಹೊನ್ನಿಗನೂರ, ಹುಚ್ಚಯ್ಯ ಹಿರೇಮಠ, ಸುಕ್ರುಸಾಬ ಮುಲ್ಲಾ, ವೀರಭದ್ರಪ್ಪ ಅಂಗಡಿ, ವಿಜಯಲಕ್ಷ್ಮಿ ಹಿರೇಮಠ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.

ಡಾ. ಶಿವಬಸಯ್ಯ ಗಡ್ಡದಮಠ ಸ್ವಾಗತಿಸಿದರು, ವ್ಹಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು. ಕೊನೆಗೆ ಸೇವಾ ಸಮಿತಿಯ ಕಾರ್ಯದರ್ಶಿ ಮಲ್ಲಯ್ಯ ಶಿರೋಳಮಠ ವಂದಿಸಿದರು.

ಕೆಲವು ಅತಿ ಬುದ್ಧಿವಂತರೆನ್ನಿಸಿಕೊAಡವರು ಆಚಾರ ಹೇಳಲು ಬಲು ಶೂರರಾಗಿದ್ದಾರೆ. ವಾಸ್ತವಿಕ ಬದುಕಿನಿಂದ ಅವರು ಬಹುದೂರ ಇದ್ದಾರೆ. ಪಾಲಕ-ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಧರ್ಮ, ಲಿಂಗಪೂಜೆಯನ್ನು ರೂಢಿಸಬೇಕು. ಸಂಸ್ಕಾರದಿಂದ ಸಮಾಜವನ್ನು ಕಟ್ಟುವ ಕೆಲಸ ಎಂದಿಗಿಂತ ಇಂದು ಅಗತ್ಯ. ಆಂತರಿಕವಾಗಿ ಲಿಂಗಾಯತರು ಸದೃಢಗೊಳ್ಳಬೇಕು ಎಂದ ಜ.ಸದಾಶಿವಾನಂದ ಮಹಾಸ್ವಾಮಿಗಳು, ಶಿವಾನುಭವ, ಸಂಗೀತ ಪರಂಪರಾ ಉತ್ಸವವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ್ದು ಶ್ಲಾಘನೀಯ ಎಂದರು.


Spread the love

LEAVE A REPLY

Please enter your comment!
Please enter your name here