ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಸಮಾಜದಲ್ಲಿ ನೈತಿಕ ಮಟ್ಟ ಕುಸಿಯುತ್ತಿದೆ. ಜೀವನದಲ್ಲಿ ಅತೃಪ್ತಿ, ಅಸೂಯೆ, ಅಸಹನೆ ಬೆಳೆಯುತ್ತಿದೆ. ಇದಕ್ಕೆ ತಡೆ ಹಾಕಬೇಕು. ಪ್ರೀತಿ-ಪ್ರೇಮ, ಅನುಕಂಪ, ತ್ಯಾಗ, ಪರೋಪಕಾರದಂತಹ ಜೀವನ ಮೌಲ್ಯಗಳು ನಮ್ಮದಾಗಬೇಕು. ಇದಕ್ಕೆ ಸಾಹಿತ್ಯದ ಅವಶ್ಯಕತೆ ಇದೆ ಎಂದು ಕೆ.ಎಚ್.ಪಾಟೀಲ ಪ್ರತಿಷ್ಠಾನದ ಕಾರ್ಯದರ್ಶಿ ಜೆ.ಕೆ. ಜಮಾದಾರ ಹೇಳಿದರು.
ಇತ್ತೀಚೆಗೆ ಹುಲಕೋಟಿಯ ಸಹಕಾರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೌಲ್ಯ ಶಿಕ್ಷಣ ಅನುಷ್ಠಾನ ಸಮಿತಿ ಹಾಗೂ ಕೆ.ಎಚ್. ಪಾಟೀಲ ಪ್ರತಿಷ್ಠಾನ ಗದಗ ಇವರ ವತಿಯಿಂದ ಪ್ರಕಟವಾದ ಜೆ.ಕೆ. ಜಮಾದಾರ ರಚಿಸಿದ `ಸುನೀತಿ ಪಥ-ನೂರೊಂದು ಕಥೆಗಳು’ ಕಥಾ ಸಂಕಲನದ ಕವನ ಕಮ್ಮಟ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
`ಸುನೀತಿ ಪಥ’ವನ್ನು ಶಾಲಾ ಹಂತದಲ್ಲಿ ಮಕ್ಕಳಿಗೆ ಬೊಧಿಸಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಸುನೀತಿ ಪಥ ಕಥೆಗಳನ್ನು ಆಧರಿಸಿದ ನಾಟಕಗಳು ಎಂಬ ಪುಸ್ತವೂ ರಚಿತಗೊಂಡಿದೆ. ಇದರ ಮುಂದುವರೆದ ಭಾಗವಾಗಿ ಸುನೀತಿ ಪಥ ಕಥೆಗಳನ್ನು ಆಧರಿಸಿ ಕವನಗಳನ್ನು ರಚಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು, ತಾವೆಲ್ಲ ಈ ಕಾರ್ಯಕ್ಕೆ ಕೈಜೋಡಿಸಿ ಎಂದು ವಿನಂತಿಸಿದರು.
ಪುಸ್ತಕದಲ್ಲಿನ ಕಥೆಗಳಿಗೆ ತಕ್ಕಂತೆ ಅತ್ಯಂತ ಸುಂದರವಾಗಿ ಚಿತ್ರಗಳನ್ನು ರಚಿಸಿದ ಚಿತ್ರಕಲಾ ಶಿಕ್ಷಕರನ್ನು ಗೌರವಿಸಿದ ಪುಂಡಲೀಕ ಕಲ್ಲಿಗನೂರ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಸಂಸ್ಕಾರದ ಅವಶ್ಯಕತೆ ಇದೆ. ಆ ಸಂಸ್ಕಾರವನ್ನು ಮೌಲ್ಯ ಶಿಕ್ಷಣ ಅನುಷ್ಠಾನ ಸಮಿತಿಯು ಕಥೆ, ನಾಟಕ, ಕವನಗಳ ರೂಪದಲ್ಲಿ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರವೀಂದ್ರನಾಥ ಮೂಲಿಮನಿ ಮಾತನಾಡಿ, ಈ ವಿನೂತನ ಕಾರ್ಯಕ್ಕೆ ಡಿ.ಆರ್. ಪಾಟಿಲರ ಮಾರ್ಗದರ್ಶನದಲ್ಲಿ ಜೆ.ಕೆ.ಜಮಾದಾರ, ಎ.ಎನ್. ನಾಗರಳ್ಳಿ. ಆರ್.ಆರ್. ಸಾವುಕಾರ ಇವರ ಕಾರ್ಯ ಶ್ಲಾಘನೀಯ. ಇಂಥಹ ಉತ್ತಮ ಕಾರ್ಯಕ್ಕೆ ನೀವು ಮುಂದಾಗಿದ್ದು ಅಭಿನಂದನಾರ್ಹ ಎಂದರು.
ಶಾಂತಾ ಹಂಚಿನಾಳ ಪ್ರಾರ್ಥನೆ ಹಾಡಿದರು. ಡಾ.ರಶ್ಮಿ ಅಂಗಡಿ ಸ್ವಾಗತಿಸಿದರು. ದಾನಮ್ಮಾ ತೆಗ್ಗಿನಕೇರಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಹೇರಲಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಆರ್.ಆರ್. ಸಾವುಕಾರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು, ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಣಾಧಿಕಾರಿ ಎ.ಎನ್. ನಾಗರಳ್ಳಿ ಮಾತನಾಡಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಿ ಅವರನ್ನು ಶ್ರೇಷ್ಠ ನಾಗರಿಕರನ್ನಾಗಿ ಮಾಡುವ ಮೂಲಕ ಸಂತೃಪ್ತ ಸಮಾಜ ನಿರ್ಮಿಸುವ ಗುರಿಯನ್ನು ಈ ಮೌಲ್ಯ ಶಿಕ್ಷಣ ಅನುಷ್ಠಾನ ಸಮಿತಿಯು ಹೊಂದಿದೆ. ಪ್ರತಿಯೊಂದು ಜೀವನ ಮೌಲ್ಯ ಮಕ್ಕಳ ಜೀವನದ ಭಾಗವಾಗಬೇಕು.
ಅದು ಮಕ್ಕಳ ಆಚರಣೆಯಲ್ಲಿ ಪ್ರತಿಫಲನಗೊಳ್ಳಬೇಕು. ಅಲ್ಲದೇ ಅದು ಅವರ ಜೀವನದಲ್ಲಿ ಪ್ರಭಾವೀ ಪಾತ್ರ ನಿರ್ವಹಿಸಬೇಕು ಎಂಬ ಸದುದ್ದೇಶದಿಂದ ನಾವು ಈ ಎಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.