ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ನಿಮಿತ್ತ ಡಿ. 9ರಂದು ಲಿಂಗಧಾರಣೆ ಹಾಗೂ `ಶ್ರೀದೇವಿ ಮಹಾತ್ಮೆ’ ದೊಡ್ಡಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಗೌರಿಗುಡಿ ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. ೯ರಂದು ಬೆಳಿಗ್ಗೆ ಓಂಕಾರೇಶ್ವರ ಹಿರೇಮಠದ ಫಕೀರೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಿಂಗಧಾರಣೆ ಕಾರ್ಯಕ್ರಮ ನಡೆಯಲಿದೆ. ಮಾಂತಯ್ಯಸ್ವಾಮಿ ಸೋಮಶೇಖರಮಠ, ಶರಣಯ್ಯ ಶಿವಪ್ಪಯ್ಯನಮಠ ನೇತೃತ್ವ ವಹಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ಕಾರ್ತಿಕೋತ್ಸವ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಅಶೋಕ ಸುತಾರ ಮಾತನಾಡಿ, ರಾಮಾಯಣ-ಮಹಾಭಾರತವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ದೊಡ್ಡಾಟ ಪ್ರಮುಖ ಪಾತ್ರ ವಹಿಸಿದೆ. ನಶಿಸುತ್ತಿರುವ ಈ ಜಾನಪದ ಕಲೆಯನ್ನು ಉಳಿಸುವ ಉದ್ದೇಶದಿಂದ ಶ್ರೀದೇವಿ ಮಾಹಾತ್ಮೆ ಎನ್ನುವ ದೊಡ್ಡಾಟವನ್ನು ರಾತ್ರಿ 8 ಗಂಟೆಗೆ ಪ್ರದರ್ಶಿಸಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಉದ್ಘಾಟಿಸುವರು. ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಶ್ರೀ ಗೌರಿಶಂಕರ ದೇವಸ್ಥಾನ ಸೇವಾ ಸಮಿತಿ, ಗೌರಿಗುಡಿ ಓಣಿ ವೀರಶೈವ ಸಮಾಜ, ಬನ್ನಿಮಹಾಂಕಾಳಿ ಭಜನಾ ಮಂಡಳಿ, ಗೌರಿಗಣೇಶ ಶಿಕ್ಷಣ ಸಂಸ್ಥೆ, ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವಾನಂದ ನಾಗರಾಳ, ಸುಭಾಸ ಮಳಗಿ, ಅಶೋಕ ಸುತಾರ, ಶರಣಬಸಪ್ಪ ಗುಡಿಮನಿ, ಶಿವಪುತ್ರಪ್ಪ ಬೆಂತೂರ, ಶರಣಪ್ಪ ಅಣ್ಣಿಗೇರಿ, ಬಸವರಾಜ ಕುಂದಗೋಳ, ಸಿದ್ದಲಿಂಗೇಶ ಮುಳ್ಳಾಲ, ಸುದೀಪ ಕಣವಿ, ಪ್ರಕಾಶ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.