ಬೆಂಗಳೂರು ಗ್ರಾಮಾಂತರ:- ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ವಿದೇಶಕ್ಕೆ ಹಾರುತ್ತಿದ್ದ ಆಂಧ್ರದ ಚಂದ್ರಗಿರಿಯ ಮಾಜಿ ಶಾಸಕನನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಂದ್ರಗಿರಿಯ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಗನ್ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಹಗರಣದಲ್ಲಿ ಚವಿರೆಡ್ಡಿ ಕೂಡ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಲುಕ್ಔಟ್ ನೋಟಿಸ್ ಸಹ ಜಾರಿಯಾಗಿದೆ. ಆದಾಗ್ಯೂ, ಚವಿರೆಡ್ಡಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದರು. ವಿದೇಶಕ್ಕೆ ಅಕ್ರಮವಾಗಿ ತೆರಳಲು ಯತ್ನಿಸುತ್ತಿದ್ದ ವೇಳೆ ಅವರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ಮಧ್ಯರಾತ್ರಿಯೇ ಆಂಧ್ರದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆಂಧ್ರದ ಎಎಸ್ಪಿ ಮಹೇಶ್ ವಶಕ್ಕೆ ಚವಿರೆಡ್ಡಿಯನ್ನು ಒಪ್ಪಿಸಲಾಗಿದೆ. ನಂತರ ಚವಿರೆಡ್ಡಿಯನ್ನು ಆಂಧ್ರ ಪೊಲೀಸರು ಕರೆದೊಯ್ದಿದ್ದಾರೆ.
ಬೆಂಗಳೂರಿನಿಂದ ಶ್ರೀಲಂಕಾದ ಕೊಲಂಬೊಗೆ ತೆರಳಲು ಮುಂದಾಗಿದ್ದ ಭಾಸ್ಕರ್ ರೆಡ್ಡಿ ಅವರನ್ನು ಮೊದಲಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದರು. ನಂತರ, ಅವರನ್ನು ಬಂಧಿಸಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮದ್ಯ ಹಗರಣ ಪ್ರಕರಣದಲ್ಲಿ, ಭಾಸ್ಕರ್ ರೆಡ್ಡಿಯನ್ನು ಎಸ್ಐಟಿ ಅಧಿಕಾರಿಗಳು ಎ-38 ಎಂದು ಗುರುತಿಸಿದ್ದಾರೆ. ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರ ಬಾಲ್ಯದ ಸ್ನೇಹಿತ ಮತ್ತು ಆಪ್ತ ಸಹಚರ ವೆಂಕಟೇಶ್ ನಾಯ್ಡು ಅವರನ್ನು ಸಹ ಎಸ್ಐಟಿ ಬಂಧಿಸಿದೆ. ಈ ಪ್ರಕರಣದಲ್ಲಿ ವೆಂಟೇಶ್ ನಾಯ್ಡು ಅವರನ್ನು ಎ-34 ಎಂದು ಎಸ್ಐಟಿ ಸೇರಿಸಿದೆ. ಚೆವಿರೆಡ್ಡಿ ಮತ್ತು ವೆಂಕಟೇಶ್ ನಾಯ್ಡು ವಿರುದ್ಧ ಲುಕೌಟ್ ನೋಟಿಸ್ ಇದ್ದ ಕಾರಣ, ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದು ಎಸ್ಐಟಿ ಅಧಿಕಾರಿಗಳಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ. ಎಸ್ಐಟಿ ತಂಡಗಳು ಬೆಂಗಳೂರಿಗೆ ಹೋಗಿ ಬುಧವಾರ ಮುಂಜಾನೆ ಇಬ್ಬರನ್ನೂ ಬಂಧಿಸಿವೆ.