ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶ್ರಾವಣ ಮಾಸದಲ್ಲಿ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಶಿವಶರಣರ ತತ್ವ ಭೋದನೆಗಳನ್ನು ಶ್ರವಣ ಮಾಡಿಕೊಳ್ಳಬೇಕು ಎಂದು ಮುಂಡರಗಿ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿಗಳು ಹೇಳಿದರು.
ಇಲ್ಲಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ ಗುಡ್ಡಾಪೂರ ದಾನಮ್ಮದೇವಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ದಿನ ನಿತ್ಯದ ಜಂಜಾಟದ ಬದುಕಿನಲ್ಲಿ ಧಾರ್ಮಿಕತೆಯನ್ನು ಒಂದು ಗಂಟೆಯಾದರೂ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಸಾಧಕರ ನೀತಿ, ಅವರ ಜೀವನ ಚರಿತ್ರೆ ಸ್ಫೂರ್ತಿಯಾಗುತ್ತದೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಮಾತನಾಡಿ, ನಮ್ಮ ಪೂರ್ವಜರು ಲಕ್ಕುಂಡಿ ಗ್ರಾಮದಲ್ಲಿ ನೂರೊಂದು ಗುಡಿ, ಬಾವಿಗಳನ್ನು ನಿರ್ಮಿಸಿದ್ದಾರೆ. ಇದರ ಹಿಂದೆ ನಮ್ಮ ಜಂಜಾಟದ ಜೀವನಕ್ಕೆ ಧಾರ್ಮಿಕ ಮನೋಭಾವನೆ ಮೂಡಲಿ, ದೇವರ ಬಗ್ಗೆ ಭಯ-ಭಕ್ತಿ ಬರಲಿ ಎಂಬ ಉದ್ದೇಶವಿದೆ. ಇಲ್ಲಿ ಹಲವಾರು ಶಿವಶರಣರು ಶ್ರದ್ಧೆ, ನಿಷ್ಠೆ, ಆಚಾರ-ವಿಚಾರದಿಂದ ತಮ್ಮ ಜೀವನವನ್ನು ಸಾಗಿಸಿದ್ದಾರೆ. ಅವರ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.
ಡಾ. ಗಿರಜಾ ಹಸಬಿ ಪುರಾಣ ಪ್ರವಚನವನ್ನು ಆರಂಭಿಸಿದರು. ಷಡಕ್ಷರಯ್ಯ ಬದ್ನಿಮಠ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು.
ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಸದಸ್ಯರಾದ ವಿರೂಪಾಕ್ಷಪ್ಪ ಬೆಟಗೇರಿ, ರಜೀಯಾಬೇಗಂ ತಹಸೀಲ್ದಾರ, ಎಸ್.ಬಿ. ಕಲಕೇರಿ, ಅಶೋಕ ಬೂದಿಹಾಳ, ನಜೀರಸಾಬ ಕಿರಟಗೇರಿ, ಶಾಂತಮ್ಮ ಕಣವಿ, ಚಂದ್ರಶೇಖರಪ್ಪ ಮೂಡಲತೋಟ, ನೀಲಮ್ಮ ವಡ್ಡರ, ಪ್ರೇಮಾ ಮಟ್ಟಿ, ಶಿವಪ್ಪ ಕಮತರ, ಈರಣ್ಣ ತಿಮ್ಮಾಪೂರ, ಗಿರಿಜಮ್ಮ ಚಬ್ಬೇರಭಾವಿ, ಸಾವಿತ್ರಿ ಯಲಿಶಿರುಂದ, ಅನ್ನದಾನೀಶ್ವರ ಸೇವಾ ಸಮಿತಿಯ ಅಧ್ಯಕ್ಷ ಅಂದಾನಯ್ಯ ಮುನವಳ್ಳಿಮಠ ಉಪಸ್ಥಿತರಿದ್ದರು. ಅಂಬರೀಶ ಕರೆಕಲ್ಲ ಸ್ವಾಗತಿಸಿದರು. ಮುತ್ತುರಾಜ್ ಗಡ್ಡಿ ನಿರೂಪಿಸಿ ವಂದಿಸಿದರು.
ಡಾ. ಸಂಗಮೇಶ ಕೊಳ್ಳಿಯವರ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಮತ್ತು ಟಿ.ವಿ ಮಾಧ್ಯಮಗಳ ಬೆನ್ನು ಹತ್ತಿ ನಮ್ಮ ಪೂರ್ವಜರು ಮಾಡುವ ಶ್ರಮದಾನವನ್ನು ಮರೆತಿದ್ದಾರೆ. ಇದರಿಂದ ಯುವಕರಲ್ಲಿ ಅನಾರೋಗ್ಯ ಕಾಡುತ್ತಿದೆ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳಬೇಕಿದೆ ಎಂದು ಕಿವಿಮಾತು ಹೇಳಿದರು.