ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಮಾಜದಲ್ಲಿ ಸಮುದಾಯಗಳ ನಡುವೆ ಪರಸ್ಪರ ಪ್ರೀತಿ ಬೆಳೆಸುವ, ಮನಸ್ಸುಗಳನ್ನು ಜೋಡಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲಾ ಸಭಾಂಗಣದಲ್ಲಿ ನಡೆದ ದಿ. ಯು.ಟಿ. ಫರೀದ್ ಅವರ ಸ್ಮರಣಾರ್ಥ 2024ನೇ ಸಾಲಿನ ರಾಜ್ಯಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಕನ್ನಡ–ಉರ್ದು ಕವಿಗೋಷ್ಠಿ ಕಾರ್ಯಕ್ರಮ ಹಾಗೂ ಸಾಹಿತಿ ಹಾಗೂ ಜೈಲರ್ ಡಾ. ಐ.ಜೆ. ಮ್ಯಾಗೇರಿ ಅವರ ‘ಜೈಲ್ ಡೈರಿ’ ಕೃತಿಗೆ ರಾಜ್ಯಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಯುವಜನರಲ್ಲಿ ಇಂತಹ ಸಾಹಿತ್ಯದ ಅಭಿರುಚಿ ಬೆಳೆಸಬೇಕಾಗಿದೆ. ಪಾಲಕರು ಮಾಲ್ಗಳಿಗೆ, ಬೀಚ್ಗಳಿಗೆ ಮಕ್ಕಳನ್ನು ಕರೆದೊಯ್ದುವಂತೆ ಸಾಹಿತ್ಯ ಕಾರ್ಯಕ್ರಮಗಳಿಗೂ ಕರೆದುಕೊಂಡು ಹೋಗಬೇಕು. ಮಕ್ಕಳಲ್ಲಿ ಪುಸ್ತಕ ಓದುವ, ಸಾಹಿತ್ಯದ ನುಡಿಗಳನ್ನು ಕೇಳುವ ಹವ್ಯಾಸ ಬೆಳೆಯಬೇಕು’ ಎಂದರು.
ಇಂದಿನ ಸಮಾಜದಲ್ಲಿ ಬಡತನ, ಅಜ್ಞಾನ ಮತ್ತು ಅಸಮಾನತೆಗಳ ವಿರುದ್ಧ ಹೋರಾಟಕ್ಕೆ ಶಿಕ್ಷಣವೇ ಪರಿಣಾಮಕಾರಿ ಅಸ್ತ್ರವಾಗಿದೆ ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿರಬಾರದು. ಅವರಿಗೆ ಮೌಲ್ಯಾಧಾರಿತ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯತೆಯ ಅರಿವು ಬೆಳೆಸಬೇಕು. ಇದಕ್ಕೆ ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯಬೇಕು. ಸಂಭಾಷಣೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಯಾಗುತ್ತದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಐ.ಜೆ. ಮ್ಯಾಗೇರಿ, ರಾಜೂರ ಎಂಬ ಪುಟ್ಟ ಗ್ರಾಮದ ಕಡು ಬಡತನದ ಹಿನ್ನೆಲೆಯಿಂದ ಹೊರಬಂದು ಇಂದು ಜೈಲರ್ ಹುದ್ದೆ ಹಾಗೂ ಸಾಹಿತ್ಯಿಕ ಗೌರವವನ್ನು ಪಡೆಯಲು ಶಿಕ್ಷಣವೇ ಕಾರಣವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಎ.ಎಸ್. ಮಕಾನದಾರ, ಡಾ. ಹಸೀನಾ ಹೆಚ್. ಖಾದ್ರಿ, ಶಿಲ್ಪಾ ಮ್ಯಾಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಡೆದ ಕನ್ನಡ–ಉರ್ದು ಕವಿಗೋಷ್ಠಿಯಲ್ಲಿ ಮೊಹಮ್ಮದ್ ಅರ್ಶದ್ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್ ವಣಗೇರಿ, ಖಾಝಿ ಶಬ್ಬಿರ್ ಅಹ್ಮದ್ ಶಬ್ಬಿರ್ ಮನ್ಸೂರಿ ಹಾಗೂ ಬಿ.ಎ. ಮುಹಮ್ಮದ್ ಅಲಿ ಅವರು ತಮ್ಮ ಕವಿತೆಗಳ ಮೂಲಕ ಸಾಹಿತ್ಯಾಸಕ್ತರಿಗೆ ಚಿಂತನೆಗೆ ದಿಕ್ಕು ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮೊಹಮ್ಮದ್ ಅರ್ಶದ್ ಹಿರೇಹಾಳ ಅವರು ನಿಭಾಯಿಸಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಉಮರ್ ಯು.ಹೆಚ್. ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿ ಎ ಕೆಂಚರೆಡ್ಡಿ, ರಾಜು ಸಾಂಗ್ಲಿಕರ್, ಮುರ್ತಜಾ ಡಾಲಾಯತ್, ಅಜಿತ ಬಾಗಮಾರ, ಬಸವರಾಜ ಕೊಟಗಿ, ಹಸನಸಾಬ ತಟಗಾರ, ರಫೀಕ್ ತೋರಗಲ್, ಎಮ್ ಎಚ್ ಕೋಲಕಾರ, ದಾವಲಸಾಬ ತಾಳಿಕೋಟಿ, ಶರೀಫ ಡಾಲಾಯತ, ಉಪಸ್ಥಿತರಿದ್ದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಯು.ಟಿ. ಖಾದರ್ ಅವರ ಸರಳತೆ, ಸಾಮಾಜಿಕ ಕಾಳಜಿ ಹಾಗೂ ಪ್ರಗತಿಪರ ಚಿಂತನೆಗಳು ಶ್ಲಾಘನೀಯ ಅವರಿಗೆ ಇನ್ನೂ ಉನ್ನತ ಸ್ಥಾನಮಾನ ತಂದುಕೊಡಲಿ ಎಂದು ಹಾರೈಸಿದರು. ಜೊತೆಗೆ ಪ್ರಶಸ್ತಿ ಪುರಸ್ಕೃತ ಡಾ. ಐ.ಜೆ. ಮ್ಯಾಗೇರಿ ಅವರ ಪತ್ನಿ ಆದರ್ಶ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದು, ಆ ಶಾಲೆ ರಾಜ್ಯಮಟ್ಟದಲ್ಲಿ ನಂ.1 ಸ್ಥಾನ ಗಳಿಸಲು ಅವರ ಶ್ರಮ ಪ್ರಮುಖವಾಗಿದೆ ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಅಂತರಾತ್ಮವಾಗಿದ್ದು, ಮುಸ್ಲಿಮ್ ಸಾಹಿತ್ಯವು ಕನ್ನಡ ಸಾಹಿತ್ಯಧಾರೆಯೊಂದಿಗೇ ಬೆರೆತು ಸಮಾಜದ ನೋವು, ಆಶಯ ಮತ್ತು ಹೋರಾಟಗಳನ್ನು ಪ್ರತಿಬಿಂಬಿಸಿದೆ. ಇಂತಹ ಸಾಹಿತ್ಯಿಕ ಪ್ರಶಸ್ತಿಗಳು ಹೊಸ ಬರಹಗಾರರಿಗೆ ಪ್ರೇರಣೆಯಾಗಿ, ಭಾಷೆಗಳ ನಡುವಿನ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.



