ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಗ್ಗಟ್ಟಿನ ಮಂತ್ರ ಜಪಿಸುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿಯೊಬ್ಬರೂ ಸ್ನೇಹ, ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದಿರುವ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳು ಮನುಷ್ಯನ ಏಳಿಗೆಗೆ ಸಹಕಾರಿಯಾಗಿವೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಮುಸ್ಲಿಂ ನೌಜವಾನ್ ಟ್ರಸ್ಟ್ ಕಮಿಟಿ ಮರ್ಕಜ್ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಸ್ಥಳೀಯ ಶಾದಿ ಮಹಲ್ನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆಯ ಅಂಗವಾಗಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಧಕಾರದಲ್ಲಿದ್ದ ಸಮಾಜದಲ್ಲಿ ಬೆಳಕು ತುಂಬಿದ ಮಹಾನ್ ಪುರುಷರಲ್ಲಿ ಪ್ರವಾದಿ ಮುಹಮ್ಮದ್ ಒಬ್ಬರು. ಮಾನವರೆಲ್ಲರೂ ಸಮಾನರು ಎನ್ನುವ ಅವರ ಸಂದೇಶ ಸರ್ವಕಾಲಿಕ ಶ್ರೇಷ್ಠವಾಗಿದೆ. ಎಲ್ಲರೂ ಪರಸ್ಪರ ಪ್ರೀತಿ, ನಂಬಿಕೆಯೊಂದಿಗೆ ಒಂದಾಗಿ ಬಾಳಿದರೆ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯಿಂದ ಬದುಕು ನಡೆಸಲು ಸಾಧ್ಯ. ನರೇಗಲ್ಲಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಹಿಂದೂ ಮುಸ್ಲಿಂ ಸಮಾಜದವರು ಭಾವೈಕ್ಯತೆಯಿಂದ ಒಂದಾಗಿ ಬಾಳುತ್ತಿದ್ದಾರೆ. ಇದು ನಿರಂತರವಾಗಿ ಸಾಗಲಿ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ರ್ಯಾಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ಧರ್ಮದ ವಿದ್ಯಾರ್ಥಿಗಳನ್ನು, ಸಾಧಕರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಹಜರತ್ ಮೌಲಾನಾ ಅಬ್ದುಲ್ ವಹಾಬ್ ಖಾಜಿಯವರು ಧರ್ಮ ಬೋಧನೆ ನೀಡಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಮಕಾಂದರ, ಮಿಥುನ್ ಪಾಟೀಲ, ಡಾ. ಕೆ.ಬಿ. ಧನ್ನೂರ, ವಿ.ಆರ್. ಗುಡಿಸಾಗರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಫಕ್ರುಸಾಬ ರೇವಡಿಗಾರ, ಕಮಿಟಿಯ ಅಧ್ಯಕ್ಷ ಖಾದರಬಾಷಾ ಹೂಲಗೇರಿ, ಮುತ್ತಪ್ಪ ನೂಲ್ಕಿ, ಗದಗ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಯೂಸುಫ್ ಇಟಗಿ, ಶರಣಪ್ಪ ಬೆಟಗೇರಿ, ಈರಣ್ಣ ಶೆಟ್ಟರ, ಎಚ್.ಎಸ್. ಸೋಂಪೂರ, ವೀರಯ್ಯ ಸೋಮನಕಟ್ಟಿಮಠ, ವಿದ್ಯಾಧರ ದೊಡ್ಡಮನಿ, ಅಶೋಕ ಮಂದಾಲಿ, ಎ.ಎ. ನವಲಗುಂದ, ದಾವೂದ್ ಅಲಿ ಕುದರಿ, ಬಸೀರಾಬಾನು ನದಾಫ್, ಮಹ್ಮದ್ ಗೌಸ್ ಹೊಸಮನಿ, ದಾವಲಸಾಬ ರಾಹುತ್, ದಾದಾಸಾಬ ಹವಾಲ್ದಾರ ಇದ್ದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳು, ಧರ್ಮ ಸಂಸ್ಥಾಪಕರು ನೀಡಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.