ವಿಜಯಸಾಕ್ಷಿ ಸುದ್ದಿ, ಗದಗ:: ಇಚ್ಛೆಗಳನ್ನು ನಿಯಂತ್ರಿಸಿಕೊಂಡು ಮನುಷ್ಯ ಜನ್ಮವನ್ನು ವ್ರತ-ನಿಯಮಗಳ ಪಾಲನೆಯ ಮೂಲಕ ಸತ್ಫಲಗೊಳಿಸುವುದೇ ಉತ್ತಮ ತಪವಾಗಿದ್ದು, ಇದ್ದದ್ದರಲ್ಲಿ ಇದ್ದುದನ್ನು ಅನುಭವಿಸುವುದು, ಅಂದರೆ ಸಹಜತೆಯಿಂದ ಬಾಳುವುದು ಜಾಣತನವಾಗಿದೆ ಎಂದು ರಂಜಿತಾ ಮೇಲಾಣಿ ಹೇಳಿದರು.
ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಸೊರಟೂರದ ಶಾಂತಿನಾಥ ಬಸದಿಯ ಸಭಾಭವನದಲ್ಲಿ ಆಯೋಜಿಸಿದ್ದ ‘ಉತ್ತಮ ತಪಧರ್ಮ’ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎನ್. ಮಲ್ಲಾಡದ ಅವರು ಮಾತನಾಡಿ,”ನಮ್ಮ ನಾಡಿನ ಅನೇಕ ಮಹಾಪುರುಷರು, ಮಹನೀಯರು ಉನ್ನತೋನ್ನತ ಪದವಿಗಳನ್ನು ಹೊಂದಿದ್ದರೂ ಅವುಗಳತ್ತ ಇಚ್ಛೆ ತೋರಿಸದೇ, ತೃಣಕ್ಕೆ ಸಮಾನವೆಂದು ಭಾವಿಸಿ, ಉತ್ತಮ ತಪದ ಮೂಲಕ ಇಂದಿಗೂ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, “ಇಚ್ಛೆಗಳನ್ನು ನಿಯಂತ್ರಿಸಿಕೊಳ್ಳಲು ಮಹಾಪುರುಷರಷ್ಟೆ ಸಮರ್ಥರಾಗಬೇಕು ಎಂಬುದಿಲ್ಲ. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ‘ಬದುಕು, ಬದುಕಲು ಬಿಡು’, ‘ಪರಸ್ಪರೋಪಗ್ರಹೋ ಜೀವಾನಾಂ’ ಎಂಬ ತತ್ವಗಳಿಗೆ ಬದ್ಧವಾಗಿ ಬಾಳಿದರೆ ಸಾಮಾನ್ಯ ವ್ಯಕ್ತಿಯಿಂದಲೂ ಈ ತಪಸ್ಸು ಸಾಧ್ಯವಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಯಶವಂತ ಸಿದ್ದಣ್ಣವರ, ಪ್ರಕಾಶ ಮುತ್ತಿನ, ಶಿವಪ್ಪ ಹೋಳಗಿ, ಧರ್ಮಣ್ಣ ಹೊಸೂರ, ಚಂದ್ರಪ್ಪ ಮಲ್ಲಾಡದ, ಹನಮಂತಪ್ಪ ಬೆಂತೂರ, ಅಭಿನಂದನ ಬೆಂತೂರ ಸೇರಿದಂತೆ ಸ್ಥಳೀಯ ಶ್ರಾವಕ-ಶ್ರಾವಿಕೆಯರು ಭಾಗವಹಿಸಿದ್ದರು.