ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ರೂಪಿಸಿದ ಯೋಜನೆಯನ್ವಯ ರಾಜ್ಯದ ಆಯವ್ಯಯ ತಯಾರಾಗಬೇಕು. ಆ ಮೂಲಕ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಆಶಿಸಿದರು.
ಅವರು ಶನಿವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ 2027-28ನೇ ಸಾಲಿನ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಜನಪರ ಯೋಜನೆಯನ್ನಾಗಿಸುವ ಕುರಿತು ಜಿ.ಪಂ, ತಾ.ಪಂ, ಗ್ರಾ.ಪಂ ಹಾಗೂ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಇವರ ಸಹಯೋಗದಲ್ಲಿ ನಡೆಸಿದ ತಾಲೂಕು ಮಟ್ಟದ ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಬಲವರ್ಧನೆಯಾಗಬೇಕು ಮತ್ತು ಆ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆ ಜನರಿಗೆ ಹತ್ತಿರವಾಗಬೇಕು. ಸಂವಿಧಾನದಡಿ ಪ್ರತಿಯೊಬ್ಬರಿಗೂ ಇರುವ ಸಮಾನ ನ್ಯಾಯ, ಸ್ಥಾನಮಾನ, ಅವಕಾಶ, ಹಕ್ಕುಗಳನ್ನರಿತು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಕ್ಕೆ ಕೈ ಜೋಡಿಬೇಕು. ಪಂಚಾಯತ್ ರಾಜ್ ವ್ಯವಸ್ಥೆಯ ಯೋಜನೆಗಳು ಸರ್ವಜನರ ಹಿತ ಮತ್ತು ಅವಶ್ಯಕತೆಗನುಗುಣವಾಗಿ ತಳಮಟ್ಟದಿಂದಲೇ ರೂಪಿತವಾಗಬೇಕು ಎಂಬ ಆಶಯದಿಂದ 2027-28ರ ಬಜೆಟ್ಗೆ ಪೂರ್ವಕವಾಗಿ ಜನಾಭಿಪ್ರಾಯ, ಚಿಂತನ-ಮಂಥನಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.
ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ ಮಾತನಾಡಿದರು. ಜಿಲ್ಲಾ ಯೋಜನಾ ಅಧಿಕಾರಿ ಎ.ಎ. ಕಂಬಾಳಿಮಠ ಪ್ರಾಸ್ತಾವಿಕ ನುಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗೋಣ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು. ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಇಓ ಧರ್ಮರ ಕೃಷ್ಣಪ್ಪ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಆನಂದಸ್ವಾಮಿ ಗಡ್ಡದೇವರಮಠ, ಚನ್ನಪ್ಪ ಜಗಲಿ, ವಿ.ಜಿ. ಪಡಗೇರಿ, ವೀರಯ್ಯ ಮಠಪತಿ, ಪ್ರವೀಣ ಬಾಳಿಕಾಯಿ, ರಾಮಣ್ಣ ಲಮಾಣಿ(ಶಿಗ್ಲಿ), ಜಯಕ್ಕ ಕಳ್ಳಿ, ಶಶಿಕಲಾ ಬಡಿಗೇರ, ಕಲ್ಲಪ್ಪ ಗಂಗಣ್ಣವರ, ಶಿವರಾಜಗೌಡ ಪಾಟೀಲ, ರಫೀಕ ಕಲಬುರ್ಗಿ, ಯಲ್ಲಪ್ಪ ತಳವಾರ, ಪರಮೇಶ ಲಮಾಣಿ, ಅಂಬರೀಶ ತೆಂಬದಮನಿ, ಫಕ್ಕೀರೇಶ ಮ್ಯಾಟಣ್ಣವರ, ಫಿರ್ದೋಸ್ ಆಡೂರ, ಯಲ್ಲವ್ವ ದುರಗಣ್ಣವರ, ಸಂತೋಷ ತಾಂದಳೆ, ರಾಜು ಓಲೇಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು, ಸಾರ್ವಜನಿಕರು ಇದ್ದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.
ದೇಶದ ಅಭಿವೃದ್ಧಿಗೆ ಗ್ರಾಮಗಳ ಅಭಿವೃದ್ಧಿ ಪೂರಕವಾಗಿದೆ. ಗ್ರಾಮ ಸಭೆಗಳಲ್ಲಿಯೂ ಬಜೆಟ್ ಬಗ್ಗೆ ಚರ್ಚೆ ಆಗಬೇಕು. 2027-28ರ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳನ್ನು ಜನರ ಅಪೇಕ್ಷೆಯಂತೆ ರೂಪಿಸಬೇಕು. ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸರ್ಕಾರವೇ ಆಗಿದ್ದು, ಅವಕ್ಕೆ ಪ್ರತ್ಯೇಕ ಅನುದಾನ ಸಿಗಬೇಕು. ಜನರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯವಂತಾಗಿ ಗ್ರಾಮಗಳು ಸ್ವಾವಲಂಬಿಯಾಗಿ ಬೆಳೆಯಬೇಕು ಎಂದು ಡಿ.ಆರ್. ಪಾಟೀಲ ಹೇಳಿದರು.



