ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಇಟ್ಟಿಗೆ ಕೆರೆಗೆ ಹೊಂದಿಕೊಂಡಿರುವ ವಿದ್ಯಾನಗರ, ಪುರಾಣಿಕಮಠ ಬಡಾವಣೆಗೆ ರಸ್ತೆ ಸಂಪರ್ಕ ಮತ್ತು ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಮನವಿ ಸಲ್ಲಿಸಿದರು.
ಈ ಬಡಾವಣೆಯಲ್ಲಿ ಸಾಕಷ್ಟು ಮನೆಗಳು ನಿರ್ಮಾಣವಾಗಿದ್ದು, ಬಡಾವಣೆಗೆ ಸಂಪರ್ಕ ಕಲ್ಪಿಸಲು ರಸ್ತೆಗಳಿಲ್ಲ. ಬಡಾವಣೆ ಹಾಗೂ ಸವಣೂರು ರಸ್ತೆ ಸಂಪರ್ಕಿಸಲು ಏಕೈಕ ರಸ್ತೆ ಇದ್ದು ಅದು ಸಹ ಸರಿಯಾಗಿಲ್ಲ. ನೀರಿನ ವ್ಯವಸ್ಥೆ ಕಲ್ಪಿಸುವುದು ಅತ್ಯವಶ್ಯವಾಗಿದೆ ಎಂಬ ಆಗ್ರಹವನ್ನು ಮನವಿ ಪತ್ರದ ಮೂಲಕ ಮಾಡಿದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ, ಸದರಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಎಂ.ಎಂ. ಛತ್ರದ, ನಾಗಪ್ಪ ಸಾತಪುತೆ, ಶಶಿಧರ ಮಳಲಿ, ಫಕ್ಕೀರೇಶ ಓದಣ್ಣನವರ, ಇಂದಿರಾ ಸಾತಪುತೆ, ರಾಘು ಸಾತಪುತೆ, ಎಂ.ಆರ್. ಹಿರೇಮಠ, ಡಾ. ವಿ.ಜಿ. ದೇಸಾಯಿ, ಅನೂಷಾ ಮಳಲಿ, ಗಿರೀಶ ಕುಬಸದ, ಕವಿತಾ ನಡುವಿನಮನಿ ಸೇರಿದಂತೆ ವಾರ್ಡಿನ ನಿವಾಸಿಗಳು ಹಾಜರಿದ್ದರು.