HomeKarnataka Newsಭ್ರಷ್ಟರ ಬೇಟೆಯಾಡಿದ 'ಲೋಕಾ': ರಾಶಿ-ರಾಶಿ ಚಿನ್ನಾಭರಣ.. ಕಂತೆ-ಕಂತೆ ನೋಟು ಪತ್ತೆ - ಅಕ್ರಮ ಕಂಡು...

ಭ್ರಷ್ಟರ ಬೇಟೆಯಾಡಿದ ‘ಲೋಕಾ’: ರಾಶಿ-ರಾಶಿ ಚಿನ್ನಾಭರಣ.. ಕಂತೆ-ಕಂತೆ ನೋಟು ಪತ್ತೆ – ಅಕ್ರಮ ಕಂಡು ದಂಗಾದ ಅಧಿಕಾರಿಗಳು!

For Dai;y Updates Join Our whatsapp Group

Spread the love

ಬೆಂಗಳೂರು:- ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟರ ಬೆವರಿಳಿಸಿದ್ದಾರೆ.

ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ, ಕಲಬುರಗಿ ಜಿಲ್ಲೆಯ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾ ಅಧಿಕಾರಿಗಳು, ಅಕ್ರಮವನ್ನು ಜಾಲಾಡಿದ್ದಾರೆ. ಈ ವೇಳೆ ಜಮೀನು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 34.90 ಕೋಟಿ ಲಕ್ಷ ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ ಎಂಟು ಮಂದಿ ವಿರುದ್ಧ ಆಯಾ ಜಿಲ್ಲಾ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಟೌನ್ ಸಿಪಿಐ ಡಿ.ಬಿ ಪಾಟೀಲ್ ಮನೆಯಲ್ಲಿ ನಗದು, ಬೆಳ್ಳಿ ನಾಣ್ಯ ಪತ್ತೆ:

ಗದಗ ನಗರದ ಶಿವಾನಂದ ನಗರದಲ್ಲಿರುವ ಸಿಪಿಐ ಡಿ.ಬಿ ಪಾಟೀಲ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನಲೆ, ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ಪಿಎಸ್ ಪಾಟೀಲ್ ನೇತೃತ್ವದಲ್ಲಿ ಡಿ.ಬಿ ಪಾಟೀಲ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಪರಿಶೀಲನೆ ವೇಳೆ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿದೆ. ಐದು ನೂರು, ಎರಡು ನೂರು ಮುಖ ಬೆಲೆಯ ನೋಟುಗಳು ಪತ್ತೆಯಾಗಿದ್ದು, ಒಂದು ಬೆಳ್ಳಿ ಕಾಯಿನ್ ಸೇರಿದಂತೆ ಚಿಲ್ಲರೆ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ಎಣಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕಾಶ್ ಎಇ, ಬಿಬಿಎಂಪಿ, ಗೋವಿಂದರಾಜನಗರ, ಬೆಂಗಳೂರು: ಇವರಿಗೆ ಸಂಬಂಧಿಸಿದ 6 ಕಡೆಗಳಲ್ಲಿ ಶೋಧ ಕಾರ್ಯ ನಡೆದಿದ್ದು, 3 ನಿವೇಶನಗಳು, 2 ವಾಸದ ಮನೆ, 1 ಎಕರೆ ಕೃಷಿ ಜಮೀನು, 42 ಸಾವಿರ ನಗದು ಪತ್ತೆಯಾಗಿದೆ. ಹಾಗೂ 43 ಲಕ್ಷದ ಮೌಲ್ಯದ ಚಿನ್ನಾಭರಣ, 15.70 ಲಕ್ಷ ಬೆಲೆಯ ವಾಹನಗಳು, 88.20 ಲಕ್ಷ ಬೆಲೆಬಾಳುವ ವಸ್ತುಗಳು ಸೇರಿ ಒಟ್ಟು 5.70 ಕೋಟಿ ಆಸ್ತಿ ಪತ್ತೆಯಾಗಿದೆ.

ಕೆ.ಜಿ.ಅಮರನಾಥ್, ಮುಖ್ಯಾಧಿಕಾರಿ ಪುರಸಭೆ, ಅನೇಕಲ್:- ಇಲ್ಲಿ ಮೂರು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿತ ಅಧಿಕಾರಿಯ 2 ನಿವೇಶನಗಳು, 1 ವಾಸದ ಮನೆ, 14.75 ಲಕ್ಷ ನಗದು, 40 ಲಕ್ಷದ ಮೌಲ್ಯದ ಚಿನ್ನ, 38 ಲಕ್ಷ ಮೌಲ್ಯದ ವಾಹನಗಳು, 12 ಲಕ್ಷದ ಬೆಲೆಯ ಇತರ ವಸ್ತುಗಳು ಸೇರಿ ಒಟ್ಟು 3.85 ಕೋಟಿ ಆಸ್ತಿ ಪತ್ತೆಯಾಗಿದೆ.

ಧಾರವಾಡದ ಮಲಪ್ರಭಾ ಪ್ರಾಜೆಕ್ಟ್ ಚೀಫ್ ಇಂಜಿನಿಯರ್ ಮನೆಯಲ್ಲಿ ಸಿಕ್ಕಿದ್ದೆಷ್ಟು?

ಧಾರವಾಡದ ಮಲಪ್ರಭಾ ಪ್ರಾಜೆಕ್ಟ್ ಚೀಫ್ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿತು. ನಗರದ ಕೆವಿಜಿ ಬ್ಯಾಂಕ್ ಬಳಿ ಇರುವ ಕ್ವಾಟ್ರಸ್ ಸೇರಿ, ಅಧಿಕಾರಿ ಅಶೋಕ್ ವಲ್ಸಂದ ಕಚೇರಿ ಮೇಲೂ ದಾಳಿ ಮಾಡಿದ್ದರು. ಲೋಕಾ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ, ಬೆಳಗಾವಿಯ ಮೂಲ ಮನೆ ಹಾಗೂ ಬಾಗಲಕೋಟೆ ಜಿಲ್ಲೆಯ ಕಜ್ಜಿದೋಣಿ ಸೇರಿ ಜಮಖಂಡಿ, ಜಕನೂರು ಮನೆ ಮೇಲೂ ದಾಳಿ ಮಾಡಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡಿದರು. ಈ ವೇಳೆ ಅಶೋಕ್, ಪುತ್ರ ಹಾಗೂ ಪತ್ನಿಯ ಬ್ಯಾಂಕ್ ಅಕೌಂಟ್ನಲ್ಲಿ ಕೋಟಿ-ಕೋಟಿ ರೂ. ಇರುವುದು ಗೊತ್ತಾಗಿದೆ. ಮೂವರ ಅಕೌಂಟ್ನಲ್ಲಿ ಒಟ್ಟಾರೆ 1.5 ಕೋಟಿ ರೂ ಪತ್ತೆಯಾಗಿದೆ.

ಅಕೌಂಟ್ ಆಫೀಸರ್ ಮನೆಯಲ್ಲಿ ಕೋಟಿ ಕೋಟಿ ಆಸ್ತಿ!

ಚಿಕ್ಕಮಗಳೂರು ನಗರ ಸಭೆ ಅಕೌಂಟ್ ಆಫೀಸರ್ ಲತಾಮಣಿ ಮನೆ ಮೇಲೆ ಲೋಕಾ ರೇಡ್ ನಡೆದಿದೆ. ಲತಾಮಣಿ ಅವರ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗ್ತಿದೆ. 300 ಗ್ರಾಂ ಚಿನ್ನ ,1 ಕೆ.ಜಿ ಬೆಳ್ಳಿ, ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿರುವ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ವರದಿ ಆಗಿದೆ.

ಅಶೋಕ ವಸಂದ್ ಮನೆಯಲ್ಲಿ ಸಿಕ್ಕಿದ್ದೆಷ್ಟು?

ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಕೆಎನ್‌ಎನ್ಎಲ್ ಧಾರವಾಡ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ ವಸಂದ್ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಕೆ‌ಎನ್‌ಎನ್‌ಎಲ್ ಇಂಜಿನಿಯರ್ ಮನೆಯಲ್ಲಿ ಅರ್ಧ ಕೆಜಿ ಚಿನ್ನ, ಎರಡು ಕೆಜಿ ಬೆಳ್ಳಿ ಪತ್ತೆಯಾಗಿವೆ. ನೆಕ್ಲೆಸ್, ಪಾಟ್ಲಿ, ಬಿಲ್ವರ್ ಸೇರಿ ಅರ್ಧ ಕೆಜಿಗೂ ಅಧಿಕ ವಿವಿಧ ಚಿನ್ನಭಾರಣ ಪತ್ತೆಯಾಗಿವೆ. ಬೆಳ್ಳಿ ಪಾತ್ರೆ, ಬೆಳ್ಳಿ ಕೊಡ, ಬೆಳ್ಳಿಯ ದೀಪಸ್ತಂಭ, ಆರತಿ ತಟ್ಟೆ ಸೇರಿ ಎರಡು ಕೆಜಿ ಬೆಳ್ಳಿ ಆಭರಣ ಪತ್ತೆಯಾಗಿವೆ. ಧಾರವಾಡ ಕಚೇರಿ ಹಾಗೂ ಬೆಳಗಾವಿಯ ಮನೆ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದರು.

ಇತ್ತ ಕಲಬುರಗಿಯಲ್ಲೂ‌ ಲೋಕಾಯುಕ್ತ ಅಧಿಕಾರಿಗಳು RDPR ಇಲಾಖೆಯ EE ಮನೆ‌ ಮೇಲೆ ರೇಡ್ ಮಾಡಿದ್ದರು. ಇನ್ನೂ‌ ನಾಲ್ಕು ದಿನಗಳಲ್ಲಿ ಪಿಆರ್‌ಇ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ ನಿವೃತಿಯಾಗಲಿದ್ದರು. ಅವರ ಬೆಂಗಳೂರಿನ ಮನೆ ಹಾಗು ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ನಿವಾಸ, ಕಚೇರಿ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದರು. 1 ನಿವೇಶನ, 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು, 2.80 ಲಕ್ಷ ರೂ.ನಗದು, ಬ್ಯಾಂಕ್ ಖಾತೆಯಲ್ಲಿ 64.75 ಲಕ್ಷ ಹಣ, 1 ಕೋಟಿ ಮೌಲ್ಯದ ಚಿನ್ನಾಭರಣ, 35 ಲಕ್ಷ ಮೌಲ್ಯದ ವಾಹನಗಳು, 40 ಲಕ್ಷ ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 6.32 ಕೋಟಿ ಆಸ್ತಿ ಪತ್ತೆಯಾಗಿದೆ.

ಒಟ್ಟಾರೆ ಶಿವಮೊಗ್ಗ, ಧಾರವಾಡ, ಬೆಂಗಳೂರು, ಚಿಕ್ಕಮಗಳೂರು, ಗದಗ ಸೇರಿದಂತೆ ಎಂಟಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಹಲವು ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮುಂಜಾನೆ ರೇಡ್ ಮಾಡುವ ಮೂಲಕ ಭ್ರಷ್ಟರ ನಿದ್ದೆಗೆಡಿಸಿದ್ದಾರೆ. ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಪರಿಶೀಲನೆ ನಡೆಸಲಾಗಿದೆ. ಲೋಕಾ ದಾಳಿ ವೇಳೆ ಕೋಟಿ ಕೋಟಿ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ. ಅಕ್ರಮ ಕಂಡು ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!