ವಿಜಯಸಾಕ್ಷಿ ಸುದ್ದಿ, ಗದಗ : ಜನಸೇವೆಗಾಗಿಯೇ ಪ್ರತೀ ಚುನಾವಣೆಯ ಸಂದರ್ಭದಲ್ಲಿ ಮತದಾರ ಪ್ರಭುಗಳು ಆರಿಸಿ ಕಳಿಸಿದ ಬಹುತೇಕ ಜನಪ್ರತಿನಿಧಿಗಳು ಚುನಾವಣೆಯ ನಂತರ ತಾವು ನೀಡಿದ ಭರವಸೆಗಳು, ಸಾರ್ವಜನಿಕರು ನೀಡಿದ ಮನವಿ, ವಿನಂತಿಗಳನ್ನು ಅಷ್ಟೇ ಬೇಗ ಮರೆತುಬಿಡುತ್ತಾರೆ. ಅದರಲ್ಲೂ ಹಳ್ಳಿಗರು, ಕೃಷಿಕರ ಬೇಡಿಕೆಗಳ ಈಡೇರಿಕೆಯಂತೂ ಕನಸಿನ ಮಾತೇ ಸರಿ.
ಇಂತದೇ ವಿಷಯಕ್ಕಾಗಿ ಸಮಿಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಗ್ರಾಮದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಕುರಿತು ಪೂರ್ವಭಾವಿ ಸಭೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರು ಮತ್ತು ಸದಸ್ಯರು ಜಂಟಿಯಾಗಿ ಸಭೆ ನಡೆಸಿದರು.
ತಿಮ್ಮಾಪೂರ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಾದ ತಿಮ್ಮಾಪೂರ ಗ್ರಾಮದಿಂದ ಕೋಟುಮಚಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಕಾಣೆಹಳ್ಳಕ್ಕೆ ಮೇಲು ಸೇತುವೆ ನಿರ್ಮಾಣ ಮಾಡುವುದು, ತಿಮ್ಮಾಪೂರ ಗ್ರಾಮದಿಂದ ಸೋಂಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡುವುದು, ನೂತನ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ತೆರೆಯುವದು, ಕುಡಿಯುವ ನೀರಿನ ಯೋಜನೆಯಾದ ಜಿಜಿಎಂ ಕಾಮಗಾರಿಯಿಂದ ರಸ್ತೆ ದುರಸ್ತಿ, ನೀರು ಪೂರೈಕೆ ಮಾಡುವುದು, ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದು, ಹರ್ಲಾಪೂರ ಹಾಗೂ ಹಳ್ಳಿಗುಡಿ ರಸ್ತೆ ಡಾಂಬರೀಕರಣ ಮಾಡುವುದು, ರೈತರು ತಮ್ಮ ಕೃಷಿ ಜಮೀನುಗಳಿಗೆ ಹೋಗುವ ದಾರಿಯನ್ನು ದುರಸ್ತಿ ಮಾಡುವುದು, ಎಂಎಸ್ಐಎಲ್ ಬಾರ್ ಬೇರೆಡೆಗೆ ಸ್ಥಳಾಂತರ ಮಾಡುವ ಕುರಿತು ಹಾಗೂ ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕಿ ಮಾರ್ಚ್ 27ರಂದು ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ ವಹಿಸಿದ್ದರು. ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಗ್ರಾ.ಪಂ ಮಾಜಿ ಅಧ್ಯಕ್ಷ ನೀಲ್ಲಪ್ಪ ಗಾಜಿ, ಶರಣಪ್ಪ ಜೋಗಿನ, ಮಹೇಶ ಗಾಜಿ, ಬಾಳಪ್ಪ ಗಂಗರಾತ್ರಿ, ಮಲ್ಲಪ್ಪ ಮಾಳಗೋಂಡರ, ರಾಮಪ್ಪ ಗಾಣದ, ಗಿರೀಶ ಗುಡ್ಲಾನೂರ, ರಾಮಪ್ಪ ಹಚ್ಚಪ್ಪನವರ, ಶಶಿ ಲಕ್ಕುಂಡಿ, ಯಲ್ಲಪ್ಪ ಶಿಗರಗಡ್ಡಿ, ರಮೇಶ ಜೋಗಿನ, ಭೀಮಪ್ಪ ಕಂಕರಿ, ಶೇಖಪ್ಪ ಜೋಗಿನ, ಹನುಮಪ್ಪ ಕೊಪ್ಪಳ, ಮಹಿಳಾ ಸಂಘದ ಸದಸ್ಯರಾದ ಸೀತಾ ಜೋಗಿನ, ಸಾವಿತ್ರಿ ಕೊಪ್ಪದ, ಅನುಸೂಯವ್ವ ಗುಡ್ಲಾನೂರ, ಹನುಮವ್ವ ತಳವಾರ, ವಿಜಯಲಕ್ಷ್ಮಿ ಜೋಗಿನ, ಶಾಂತವ್ವ ಹಳ್ಳಿಕೇರಿ ಮುಂತಾದವರು ಹಾಜರಿದ್ದರು.
ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ಬಾರಿ ಸಂಸದರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ, ಲೋಕಸಭಾ ಚುನಾವಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.