ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಜಿಲ್ಲೆಯ 24 ಚೇಕ್ ಪೋಸ್ಟ್ ಗಳಲ್ಲಿ ಪ್ರತಿ ವಾಹನಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದ್ದು, ಮೂರು ಚೇಕ್ ಪೋಸ್ಟ್ ಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಸರಿಯಾದ ದಾಖಲೆ ಹೊಂದಿರದ ಒಟ್ಟು 6,89,500 ರೂ.ಗಳ ನಗದು ಹಣವನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್ 16ರಿಂದ ಚೆಕ್ ಪೋಸ್ಟ್ ಗಳನ್ನು ತರೆದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅದರಲ್ಲೂ ಸಂಶಯಾಸ್ಪದ ವಾಹನಗಳನ್ನು ತಡೆದು, ತೀವ್ರತರವಾಗಿ ಅಧಿಕಾರಿಗಳಿಂದ ಪರಿಶೀಲಿಸಲಾಗುತ್ತಿದೆ. ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಮತ್ತು ಸರಿಯಾದ ದಾಖಲೆ ಹೊಂದಿರದ ಒಟ್ಟು ನಗದು ಹಣ 17,91,970 ರೂ.ಗಳನ್ನು ವಶಕ್ಕೆ ಪಡೆದು, ಜಿಲ್ಲಾ ಖಜಾನೆಯಲ್ಲಿ ಠೇವಣಿಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶೇರೆವಾಡ ಚೆಕ್ ಪೋಸ್ಟ್: ಕುಂದಗೋಳ ಕ್ರಾಸ್ ಹತ್ತಿರ ತೆರೆದಿರುವ ಚೇಕ್ ಪೋಸ್ಟ್ ನಲ್ಲಿ
ಅದರಗುಂಚಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಕೆಎ-63, ಎನ್-3173 ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಅದರಗುಂಚಿ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಬೇಗೂರ ಅವರ ಬಳಿ ಸರಿಯಾದ ದಾಖಲೆ ಇಲ್ಲದ 2,10,000 ರೂ ಹಣ ಪತ್ತೆಯಾಗಿದೆ. ಸರಿಯಾದ ದಾಖಲೆಯನ್ನು ನೀಡದ ಮತ್ತು ಅಧಿಕಾರಿಗಳು ವಿಚಾರಣೆ ನಡೆಸಿದಾಗ ಸಮಂಜಸ ಉತ್ತರ ನೀಡದಿರುವದರಿಂದ ಅವರ ಹಣವನ್ನು ಜಪ್ತಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಸಿಪಿಐ ಮುರಗೇಶ ಚನ್ನನವರ, ಎಂಸಿಸಿ ನೋಡಲ್
ಅಧಿಕಾರಿ ಎಸ್.ವಿ.ಕುಲಕರ್ಣಿ ಹಾಗೂ ಎಪ್.ಎಸ್.ಟಿ ನೋಡಲ್ ಅಧಿಕಾರಿ ಅಶೋಕ ಕಲಕೇರಿ ಸೇರಿದಂತೆ ಇತರರು ಇದ್ದರು.
ಕೃವಿವಿ ಚೆಕ್ ಪೋಸ್ಟ್: ಮಾ.29ರ ಬೆಳಿಗ್ಗೆ 10.45ರ ಸುಮಾರಿಗೆ ಕೃಷಿ ವಿಶ್ವವಿದ್ಯಾಲಯ ಬಳಿ ಸ್ಥಾಪಿಸಿರುವ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುವಾಗ ಅಥಣಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಬೊಲೆರೊ ಕೆಎ-71, ಎಮ್-0969 ವಾಹನವನ್ನು ಪರಿಶೀಲನೆ ಮಾಡಿದಾಗ ವಾಹನದಲ್ಲಿದ್ದ ಮಲ್ಲಿಕಾರ್ಜುನ ಬಶೆಟ್ಟೆಪ್ಪ ಹೊಳ್ಳದಮಳ ಎಂಬುವವರ ಬಳಿ ದಾಖಲೆ ಇಲ್ಲದ ರೂ.3,70,000 ನಗದು ಹಣ ಪತ್ತೆ ಆಗಿದೆ. ಈ ಕುರಿತು ದಾಖಲೆ ಸಲ್ಲಿಸಲು ಸೂಚಿಸಲಾಗಿ, ಅವರು ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ್ದಾರೆ. ತಕ್ಷಣ ಎಸ್.ಎಸ್.ಟಿ ಮ್ಯಾಜಿಸ್ಟ್ರೇಟ್ ಎಂ.ಎಚ್. ಹೊನ್ಯಾಳ ಅವರು ಸದರಿ ಹಣವನ್ನು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಧಾರವಾಡ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಸಿ ಶಾಲಂ ಹುಸೇನ್, ತಹಸೀಲ್ದಾರ ದೊಡ್ಡಪ್ಪ ಹೂಗಾರ, ಎಂಸಿಸಿ ನೋಡಲ್ ಅಧಿಕಾರಿ ಶಿವಪುತ್ರಪ್ಪ ಹೊಸಮನಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ಸಂಗಟಿಕೋಪ್ಪ ಚೆಕ್ ಪೊಸ್ಟ್
ಹುಬ್ಬಳ್ಳಿ-ಕಾರವಾರ ರಸ್ತೆಯ ಸಂಗಟಿಕೋಪ್ಪ ಚೇಕ್ ಪೋಸ್ಟ್ ನಲ್ಲಿ ರಾತ್ರಿ ವಾಹನ ತಪಾಸಣೆ ಮಾಡುವಾಗ ಕಾರವಾರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇನ್ನೋವಾ ಕ್ರಿಸ್ಟಾ ಕಾರು ಜಿಎ-06 ಇ-4482 ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಶಿರಸಿಯವರಾದ ಸತ್ಯಂ ಎಸ್.ವಿ. ಎಂಬುವವರ ಬಳಿ ರೂ. 1,09,500 ರೂ.ಗಳ ನಗದು ಹಣ ಪತ್ತೆ ಆಗಿದ್ದು, ತಪಾಸಣೆ ಸಮಯದಲ್ಲಿ ಇದಕ್ಕೆ ಸರಿಯಾದ ದಾಖಲೆ ತೋರಿಸಿಲ್ಲ. ಆದ್ದರಿಂದ ತಕ್ಷಣ ಎಸ್.ಎಸ್.ಟಿ. ಮ್ಯಾಜಿಸ್ಟ್ರೇಟ್ ದೇವರಾಜ ಸದರಿ ಹಣವನ್ನು ಜಪ್ತಿ ಮಾಡಿ ಸೀಜ್ ಮಾಡಿದ್ದಾರೆ.