ಗದಗ:- ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಮನೆ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಗಂಗಾಧರ ಶಿರೋಳ ಅವರ ಮನೆ, ಕಚೇರಿ ಹಾಗೂ ಅಳಿಯ ವಿಜಯ ಯಳಮಲಿ, ಭಾವ ನಾಗರಾಜ್ ಅಕ್ಕಿ ಮನೆಗಳ ಸಹಿತ ಸುಮಾರು 7 ಕಡೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಆಸ್ತಿ ಕಂಡು ಬಂದಿದ್ದು, ಲೋಕಾಯುಕ್ತ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.
ಭ್ರಷ್ಟ ಅಧಿಕಾರಿಯ ಅಕ್ರಮ ಆಸ್ತಿ ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ದಾಳಿ ವೇಳೆ ಭ್ರಷ್ಟ ಅಧಿಕಾರಿಯ ಮನೆಯಲ್ಲಿ ಭಾರೀ ಪ್ರಮಾಣದ ಆಸ್ತಿ ಪತ್ರ ಪತ್ತೆಯಾಗಿದೆ. ಅಲ್ಲದೇ ದಾಳಿಯಲ್ಲಿ ಚಿನ್ನ, ಬೆಳ್ಳಿ, ಕಂಡು ಬಂದಿದೆ.
ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ್ ಗೆ ಸೇರಿದ 3 ಕೋಟಿ 49 ಲಕ್ಷದ ಆಸ್ತಿ ಪತ್ತೆಯಾಗಿದ್ದು, ದಾಳಿ ವೇಳೆ ನಾಲ್ಕು ಸೈಟ್ ಪೇಪರ್ಸ್, ಐದು ಬೇನಾಮಿ ಮನೆ ಸೇರಿದಂತೆ ಎರಡು ಮನೆಗಳ ದಾಖಲೆ ಪತ್ರ ವಶಕ್ಕೆ ಪಡೆಯಲಾಗಿದೆ. ಅಂದಾಜು ಎರಡು ಕೋಟಿ ಐವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಆಸ್ತಿ ಪತ್ರ ಸಿಕ್ಕಿದ್ದು, ಬ್ಯಾಂಕ್ ನಲ್ಲಿ 21 ಲಕ್ಷ 50 ಸಾವಿರ ರೂಪಾಯಿ ಠೇವಣಿ ಇಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.
ದಾಳಿ ವೇಳೆ 23 ಲಕ್ಷ ರೂಪಾಯಿ ಮೌಲ್ಯದ 307 ಗ್ರಾಂ ಚಿನ್ನ, 3 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 3 ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ. ಅಲ್ಲದೇ ಒಂದು ಕಾರು, ಎರಡು ಬೈಕ್ ಇರುವ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಎಸ್ಪಿ ಹಣಮಂತರಾಯ, ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿದ್ದರು.