ಬೆಂಗಳೂರು:- ಪ್ರತಿಭಟನೆ ಮಾಡಲು ಸರ್ಕಾರಿ ನೌಕರರಿಗೆ ಅವಕಾಶ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಶಾಲಾ ಕೊಠಡಿಗಾಗಿ ಪ್ರತಿಭಟನೆ ಮಾಡಿದ ಶಿಕ್ಷಕನನ್ನು ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ನೌಕರರಿಗೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ. ನನ್ನ ಇಲಾಖೆಯಲ್ಲಿ ಇಂತದ್ದನ್ನ ಸಹಿಸೋಕೆ ಸಾಧ್ಯವಿಲ್ಲ ಎಂದರು. ಸರ್ಕಾರಿ ನೌಕರರಿಗೆ ಕಾನೂನು ಇದೆ. ಇಂತಹ ಸಮಸ್ಯೆ ಇದ್ದರೆ ಇಲಾಖೆ ಗಮನಕ್ಕೆ ತರಬೇಕು. ಬಿಇಓ, ಡಿಡಿಪಿಐಗಳ ಗಮನಕ್ಕೆ ತರಬೇಕು. ಏಕಾಏಕಿ ಪ್ರತಿಭಟನೆ ಮಾಡೋದು ಸರಿಯಲ್ಲ ಎಂದಿದ್ದಾರೆ.
ಹೀಗೆ ಅವರು ಪ್ರತಿಭಟನೆ ಮಾಡಿದರೆ ಅದನ್ನ ಸಹಿಸೋಕೆ ಆಗುವುದಿಲ್ಲ. ನನ್ನ ಇಲಾಖೆಯಲ್ಲಿ ಇದಕ್ಕೆ ಅವಕಾಶ ಇಲ್ಲ. ನಾವು ಬಿಲ್ಡಿಂಗ್ ಕೊಟ್ಟಿರೋದು ಅವರಿಗೆ ಗೊತ್ತಿದೆ. ಗೊತ್ತಿದ್ದು ಹೀಗೆ ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಬಿಇಓ ಅಮಾನತು ಮಾಡಿ ಆದೇಶ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಸರ್ಕಾರಿ ನೌಕರರು ಇತಿಮಿತಿಯಲ್ಲಿ ಇರಬೇಕು. ಹೀಗೆ ಮಾಡೋದು ಸರಿಯಲ್ಲ. ಪ್ರತಿಭಟನೆ ಮಾಡೋಕೆ ಸರ್ಕಾರದಲ್ಲಿ ಅವಕಾಶ ಇಲ್ಲ. ಅವರ ಸಮಸ್ಯೆ ಬಗ್ಗೆ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಇಂತಹ ವಿಷಯಕ್ಕೆ ಪ್ರತಿಭಟನೆ ಮಾಡೋದು ಸರಿಯಲ್ಲ. ಅನೇಕರು ನನಗೆ ಅಮಾನತು ವಾಪಸ್ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಈಗ ಅಮಾನತು ವಾಪಸ್ ಪಡೆಯಬೇಕು ಅಂತ ಕಡತ ತರಿಸಿದ್ದೇನೆ. ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.