ಗದಗ: ಕಮಿಷನ್ ನೀಡದಿದ್ದರೆ ಕಾಮಗಾರಿ ರದ್ದು ಮಾಡುವುದಾಗಿ ಹಾಗೂ ರೌಡಿಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರನ್ನು ರೆಡ್ ಹ್ಯಾಂಡ್ ಬಂಧಿಸಿದ್ದಾರೆ.
ಗದಗ ತಾಲೂಕಿನ ಚಿಂಚಲಿ ಗ್ರಾಮದ ಗುತ್ತಿಗೆದಾರ ವಿಜಯರಾಜ ಎಸ್. ಪೂಜಾರ ಅವರು 18-02-2026ರಂದು ಗದಗ ಲೋಕಾಯುಕ್ತ ಠಾಣೆಗೆ ದೂರು ಸಲ್ಲಿಸಿದ್ದರು. 2025ರ ಜುಲೈನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಎರಡು ಕಾಮಗಾರಿಗಳ ಆದೇಶ ಲಭಿಸಿದ್ದು, ಲಕ್ಷ್ಮೇಶ್ವರ ತಾಲೂಕು ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕಾಮಗಾರಿಗಳಲ್ಲಿ 12% ಕಮಿಷನ್ ನೀಡುವಂತೆ ಒತ್ತಾಯಿಸಿದ್ದು, ಒಟ್ಟು 11 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಕಮಿಷನ್ ನೀಡದಿದ್ದರೆ ಟೆಂಡರ್ ರದ್ದು ಮಾಡುವುದಾಗಿ ಹಾಗೂ ರೌಡಿಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು 21-02-2026ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ದಾಳಿ ನಡೆಸಿದರು. 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಶಾಸಕ ಚಂದ್ರು ಲಮಾಣಿ, ಅವರ ಪಿ.ಎ ಮಂಜುನಾಥ ವಾಲ್ಮೀಕಿ ಹಾಗೂ ಸಂಬಂಧಿ ಗುರು ಲಮಾಣಿ ಅವರನ್ನು ರೆಡ್ ಹ್ಯಾಂಡ್ ಬಂಧಿಸಲಾಯಿತು.
ಗದಗ ಹಾಗೂ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ತಂಡ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



