ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ 102 ಮತಗಟ್ಟೆಗಳಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಸುಸೂತ್ರ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆ ಜರುಗಿತು.
ಬೆಳ್ಳಬೆಳಿಗ್ಗೆಯೇ ಲಕ್ಷ್ಮೇಶ್ವರದ ಮತಗಟ್ಟೆ ಸಂಖ್ಯೆ 99, 107, 110 ಮತ್ತು 112ರಲ್ಲಿ ಮತಯಂತ್ರಗಳ ತಾಂತ್ರಿಕ ದೋಷದಿಂದ ಮತದಾನ ಪ್ರಕ್ರಿಯೆ ತಡವಾಗಿ ಪ್ರಾರಂಭವಾದವು. ಬಿಸಿಲು ಹೆಚ್ಚುವ ಭೀತಿಯಿಂದ ಬೆಳಿಗ್ಗೆ ಮತದಾನ ಚುರುಕುಗೊಂಡು ಮಧ್ಯಾಹ್ನ 1 ಗಂಟೆಯೊಳಗೆ ಶೇ.40ರಷ್ಟು ಮತದಾನವಾಗಿತ್ತು. ಸಂಜೆ 4 ಗಂಟೆಯ ನಂತರ ಮತದಾನ ಪ್ರಕ್ರಿಯೆ ಪುನಃ ಚುರುಕುಗೊಂಡಿತು. ಬಿಸಿಲ ತಾಪದ ನಡುವೆಯೂ ವಯೋವೃದ್ಧರು, ಹಿರಿಯರು, ಅಂಗವಿಕಲರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತದಾನ ಹೆಚ್ಚಳಕ್ಕಾಗಿ ಬಹುತೇಕ ಮತಗಟ್ಟೆಗಳಲ್ಲಿ ನೆರಳು-ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೆಲ ಕಡೆ ಸಖಿ, ಸಾಂಪ್ರದಾಯಿಕ, ಥೀಮ್ ಬೇಸ್ಡ್ ಮತಗಟ್ಟೆಗಳನ್ನಾಗಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸೆಲ್ಪಿ ಪಾಯಿಂಟ್ ಗಳಲ್ಲಿ ಮತದಾನದ ನಂತರ ಸೆಲ್ಪೀ ಕ್ಲಿಕ್ಕಿಸಿಕೊಂಡ ದೃಶ್ಯಗಳು ಕಂಡು ಬಂದವು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1ರಲ್ಲಿ ಬಸನಗೌಡ ಪಾಟೀಲ ಎಂಬುವರ ಬದಲಾಗಿ ಅಪರಿತ ವ್ಯಕ್ತಿಯೋರ್ವ ಮತದಾನ ಮಾಡಿ ಹೋಗಿದ್ದಾನೆ. ನಂತರ ಮತದಾನಕ್ಕೆ ಬಂದ ಬಸನಗೌಡ ಎಂಬುವವರು ಚುನಾವಣಾ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆಗಮಿಸಿದ ಚುನಾವಣಾಧಿಕಾರಿಗಳು ವಿಶೇಷ ಪ್ರಕರಣದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಘಟನೆ ಜರುಗಿದೆ. ಲಕ್ಷ್ಮೇಶ್ವರದ ಕೆಲ ಹೊಸ ಮತದಾರರ ಹೆಸರು ತಾಲೂಕಿನ ಹೊಸ ಮತಗಟ್ಟೆ ಕೇಂದ್ರ ಮುನಿಯನ ತಾಂಡಾ ಮತ್ತು ಯಲ್ಲಾಪುರದ ಮತದಾರರ ಲಿಸ್ಟ್ನಲ್ಲಿ ಸೇರ್ಪಡೆಯಾಗಿರುವುದನ್ನು ಹರಸಾಹಸ ಪಟ್ಟು ಪತ್ತೆ ಮಾಡಿದ ಕೆಲವರು ಅಲ್ಲಿಗೆ ಹೋಗಿ ಮತ ಚಲಾಯಿಸಿದ್ದಾರೆ. ಮತದಾರರ ಯಾದಿಯಲ್ಲಿ ಅನೇಕ ಹೆಸರುಗಳು ಬಿಟ್ಟು ಹೋಗಿರುವುದು ಮತದಾನದಿಂದ ಹೊರಗುಳಿದ ಪ್ರಸಂಗಗಳು ಕಂಡು ಬಂದವು. ಕೆಲವು ಕಡೆ ಸಂಜೆ 6 ಗಂಟೆಯೊಳಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡರೆ, ಇನ್ನು ಕೆಲವು ಕಡೆ ಮತದಾನ ಕೇಂದ್ರದ ಒಳಗಿದ್ದ ಎಲ್ಲ ಮತದಾರರಿಗೂ ಸಂಜೆ 7/8ಗಂಟೆಯವರೆಗೂ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಲೋಕಸಭಾ ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ನಡೆಯುವದರೊಂದಿಗೆ ಮತದಾನ ಹೆಚ್ಚಳವಾಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪ್ರಾರಂಭದ ಹಂತದಿಂದಲೂ ಕೈಗೊಂಡ ಪೂರ್ವ ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳು ಸೇರಿ ಎಲ್ಲರೂ ನೀಡಿದ ಸಹಕಾರದಿಂದ ಚುನಾವಣಾ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ, ಶೇಕಡಾವಾರು ಮತದಾನ ಹೆಚ್ಚಳವಾಗಲು ಕಾರಣವಾಗಿದೆ. ಇದಕ್ಕೆ ಶ್ರಮ ವಹಿಸಿದ ಮತ್ತು ಸಹಕಾರ ನೀಡಿದ ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿ ಮತ್ತು ಮಾಧ್ಯಮದವರ ಕಾರ್ಯ ಶ್ಲಾಘನೀಯ.
– ವಾಸುದೇವ ಎಂ ಸ್ವಾಮಿ.
ತಹಸೀಲ್ದಾರರು, ಲಕ್ಷ್ಮೇಶ್ವರ.