ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಅನ್ನೋ ಕಮಲ್ ಹಾಸನ್ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ತಕ್ಷಣವೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಮಲ್ ನಟನೆ ಥಗ್ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಥಗ್ ಲೈಫ್ ಪ್ರಚಾರ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮುಂದೆಯೇ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂಬ ಹೇಳಿಕೆ ನೀಡಿದ್ದರು. ಇದೀಗ ಕಮಲ್ ಹಾಸನ್ ಹೇಳಿಕೆಯ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಶಿವಣ್ಣ, ಕಮಲ್ ಹಾಸನ್ ನನಗೆ ಬಹಳ ಇಷ್ಟ. ನನ್ನ ತಂದೆ ಮತ್ತು ಕಮಲ್ ಅವರ ಸಂಬಂಧ ಬೇರೆ. ಅದಕ್ಕಾಗಿ ನಾನು ಅವರ ಅಭಿಮಾನಿಯಲ್ಲ. ನಾನು ಕಮಲ್ ಅವರನ್ನು ನನಗೆ ಸ್ಪೂರ್ತಿ ಎಂದು ಭಾವಿಸಿದ್ದೇನೆ. ನಮ್ಮನ್ನ ಅವರ ಕಾರ್ಯಕ್ರಮಕ್ಕೆ ಕರೆದಿದ್ದರು. ಹೀಗಾಗಿ ಹೋದ್ವಿ- ಬಂದ್ವಿ ಅಷ್ಟೇ ಎಂದಿದ್ದಾರೆ.
‘ವೇದಿಕೆ ಮೇಲೆ ಏನು ತಪ್ಪಾಯ್ತು ಎಂಬುದು ನನಗೂ ಗೊತ್ತಾಗಲಿಲ್ಲ. ಇಂದು ಬಂದು ನೋಡಿದಾಗ ವಿವಾದ ಆಗಿತ್ತು. ಅವರು ಇಲ್ಲಿಯೇ ಇದ್ದರು, ಎಲ್ಲರೊಟ್ಟಿಗೆ ಮಾತನಾಡುತ್ತಿದ್ದರು. ಇಲ್ಲಿಯೇ ಅವರನ್ನು ಕೇಳಬಹುದಿತ್ತು, ಆದರೆ ಯಾಕೆ ಆಗ ಕೇಳಲಿಲ್ಲವೊ ಗೊತ್ತಿಲ್ಲ. ಆದರೆ ಕನ್ನಡ ಪ್ರೀತಿ ಎಂಬುದು ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಬರಬಾರದು. ಕನ್ನಡ ಪ್ರೇಮ ಎಂಬುದು ಸದಾ ಕಾಲ ಜೊತೆಗೆ ಇರಬೇಕು’ ಎಂದರು ಶಿವಣ್ಣ.
‘ನಾವು ಕನ್ನಡಕ್ಕಾಗಿ ಹೋರಾಡುತ್ತೀವಿ, ಸಾಯುತ್ತೀವಿ ಬೇಕಾದರೆ. ಕೇವಲ ಮಾತಿನಲ್ಲಿ ಮಾತನಾಡಿ, ಫೋಸು ಕೊಡುವುದು ದೊಡ್ಡ ವಿಷಯ ಅಲ್ಲ. ಕನ್ನಡಕ್ಕೆ ಏನು ಮಾಡುತ್ತಿದ್ದೀವಿ ಎಂಬುದನ್ನು ನೀವೇ ಹುಡುಕಿ ನೋಡಿ, ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ ನಿಮಗೆ ಉತ್ತರ ಸಿಗುತ್ತದೆ. ಕನ್ನಡ ಸಿನಿಮಾಕ್ಕೆ ನೀವು ಏನು ಮಾಡಿದ್ದೀರಿ, ಯಾರೋ ಸ್ಟಾರ್ ನಟರ ಸಿನಿಮಾಗಳಿಗೆ ಬೆಂಬಲ ಕೊಟ್ಟರೆ ಮಾತ್ರ ಸಾಲದು. ಹೊಸಬರ ಸಿನಿಮಾಕ್ಕೂ ಬೆಂಬಲ ಕೊಡಿ. ನಾವು ಮಾಡುತ್ತಿರುವುದು ಸರಿಯಾ, ತಪ್ಪಾ ಎಂದು ನೀವೇ ಕೇಳಿಕೊಳ್ಳಿ, ನಿಮಗೆ ಉತ್ತರ ಸಿಗುತ್ತೆ’. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ಶಿವಣ್ಣ ಹೇಳಿದ್ದಾರೆ.