ಮಂಡ್ಯ: ವಿವಾಹಿತನೊಂದಿಗೆ ಯುವತಿಯ ಪ್ರೀತಿ ಹಿನ್ನೆಲೆ ತಾಯಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಂಕುತಲಾದೇವಿ (46) ಹಾಗೂ ಮಗಳು ಪ್ರಿಯಾಂಕ (19) ಎಂದು ಗುರುತಿಸಲಾಗಿದೆ.
ದಳವಾಯಿ ಕೋಡಿಹಳ್ಳಿ ಗ್ರಾಮದ ಮುತ್ತುರಾಜ್ (34) ಎಂಬ ವಿವಾಹಿತನೊಂದಿಗೆ ಪ್ರಿಯಾಂಕ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮುತ್ತುರಾಜ್ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮುತ್ತುರಾಜ್ ಪ್ರತಿದಿನ ಪ್ರಿಯಾಂಕ ಮನೆಗೆ ಬರುತ್ತಿದ್ದರೂ, ಆರಂಭದಲ್ಲಿ ಇದನ್ನು ಮನೆಯವರು ಸಾಮಾನ್ಯವೆಂದುಕೊಂಡಿದ್ದರು.
ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿರುವುದು ಪೋಷಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ತಂದೆ-ತಾಯಿ ಇಬ್ಬರಿಗೂ ಬುದ್ಧಿ ಹೇಳಿ, ಪ್ರಿಯಾಂಕನಿಗೆ ಮದುವೆ ಸಂಬಂಧ ಹುಡುಕಲಾಗಿತ್ತು. ಆದರೂ ಸಹ ಮುತ್ತುರಾಜ್ ನಿರಂತರವಾಗಿ ಪ್ರಿಯಾಂಕಳನ್ನು ಪೀಡಿಸುತ್ತಿದ್ದನು ಎಂದು ಆರೋಪಿಸಲಾಗಿದೆ.
ಇದರಿಂದಾಗಿ ಮರ್ಯಾದೆಗೆ ಅಂಜಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮೃತ ಶಂಕುತಲಾದೇವಿಯ ಪತಿ ಮಹೇಶ್ ಹಲಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹಲಗೂರು ಠಾಣೆ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.

