ವಿಜಯಸಾಕ್ಷಿ ಸುದ್ದಿ, ಧಾರವಾಡ: ಲಿಂಗೈಕ್ಯ ಮಹಾಂತೇಶ ಬೀಳಗಿ ಅವರದು ಮಾತೃಹೃದಯದ ಅಪರೂಪದ ವ್ಯಕ್ತತ್ವ. ಉತ್ತರ ಕರ್ನಾಟಕದ ಅವರ ಮಾತಿನ ಸೊಗಡು ಎಲ್ಲರ ಹೃದಯ ಗೆದ್ದಿತು. ಯುವಕ, ಯುವತಿಯರಿಗೆ, ಸಾಧಕರಿಗೆ ಅವರು ಪ್ರೋತ್ಸಾಹಕ, ಪ್ರೇರಕ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಹೇಳಿದರು.
ಅವರು ಶನಿವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಗಾಂಧಿ ಸ್ಮಾರಕ ವನದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ವಾರ್ತಾ ಹಾಗೂ ಇತರ ಇಲಾಖೆಗಳ ಸರಕಾರಿ ನೌಕರರು ಆಯೋಜಿಸಿದ್ದ ಲಿಂ. ಮಹಾಂತೇಶ ಬೀಳಗಿ ಅವರ ಗೌರವಾರ್ಥ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಂತೇಶ ಬೀಳಗಿ ಅವರು ಅಧಿಕಾರಿಗಳಿಗೆ, ವಿಶೇಷವಾಗಿ ಉತ್ತರ ಕರ್ನಾಟಕದ ಸರಕಾರಿ ಅಧಿಕಾರಿ, ನೌಕರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಪ್ರತಿಯೊಬ್ಬರಿಗೂ ಪ್ರೇರಣೆ ನೀಡುತ್ತಿದ್ದರು. ಅವರಿಂದ ಶಿಕ್ಷಣ, ಮಾರ್ಗದರ್ಶನ ಪಡೆದ ಅನೇಕರು ಇಂದು ರಾಜ್ಯ ಹಾಗೂ ಕೇಂದ್ರ ಸರಕಾರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರೋತ್ಸಾಹದಿಂದಾಗಿ ಅನೇಕ ಗ್ರಾಮೀಣ ಪ್ರತಿಭಾವಂತ ಯುವಕ, ಯುವತಿಯರು ಇಂದು ಸರಕಾರಿ ಸೇವೆಯಲ್ಲಿದ್ದಾರೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಮಾತನಾಡಿ, ಮಹಾಂತೇಶ ಬೀಳಗಿ ಅವರದು ಆಕರ್ಷಕ ವ್ಯಕ್ತಿತ್ವ. ಅವರ ನಿಸ್ವಾರ್ಥ ಸೇವೆ ಮತ್ತು ಮಾರ್ಗದರ್ಶನದಿಂದಾಗಿ ರವಿ ಚನ್ನಣ್ಣನವರ, ಯಶೋದಾ ಒಂಗೊಡಿ ಅವರಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿದ್ದಾರೆ. ಧಾರವಾಡದ ಕೀರ್ತಿಯನ್ನು ಅವರು ರಾಷ್ಟ್ರಮಟ್ಟಕ್ಕೆ ಹೆಚ್ಚಿಸಿದ್ದರು ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಸೀಲ್ದಾರ ಪ್ರವೀಣ ಹುಚ್ಚಣ್ಣವರ, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಡಿಸಿ ಕಚೇರಿಯ ಶಿರಸ್ತೇದಾರರಾದ ಮಲ್ಲಿಕಾರ್ಜುನ ಸೊಲಗಿ, ಕೆ.ಶ್ರೀಧರ, ಮುಖಂಡರಾದ ಲಕ್ಷ್ಮಣ ಬಕ್ಕಾಯಿ, ಮಹಾನಗರ ಪಾಲಿಕೆ ವಲಯ-3ರ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಎ.ಸಿ. ಕಚೇರಿ ತಹಸೀಲ್ದಾರ ಅಶ್ವಿನಿ ಚಡಚಣ, ಬೇಂದ್ರೆ ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಪತ್ರಕರ್ತ ಜಾವೀದ ಅದೋನಿ ಸೇರಿದಂತೆ ಇತರರು ಮಾತನಾಡಿ ಮಹಾಂತೇಶ ಬೀಳಗಿ ಅವರಿಗೆ ನುಡಿನಮನ ಸಲ್ಲಿಸಿದರು.
ಕಂದಾಯ ನಿರೀಕ್ಷಕ ಗುರು ಸುಣಗಾರ ಸ್ವಾಗತಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಎ.ಸಿ ಕಚೇರಿಯ ಶಿರಸ್ತೇದಾರ ರವಿ ಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಸೀಲ್ದಾರ ಪ್ರಭಾಕರ ಭಟ್, ಧಾರವಾಡ ತಹಸೀಲ್ದಾರ ಕಚೇರಿ ಶಿರಸ್ತೇದಾರ ರಮೇಶ ಬಂಡಿ, ನೌಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ಜಿ.ಪಂ ಸಹಾಯಕ ಕಾರ್ಯದರ್ಶಿ ಅಜಯ ಎನ್, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡ್ರ, ಶಿರಸ್ತೇದಾರ ಶಿವಕುಮಾರ ಮೇಟಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಸಾಗರ ಫಡ್ನಿಸ್, ನೌಕರರ ಸಂಘದ ಪದಾಧಿಕಾರಿಗಳಾದ ನಂದೀಶ ಟಿ.ಖಾಕಂಡಕಿ, ರಾಜಶೇಖರ ಹೊನ್ನಪ್ಪನವರ, ಎನ್.ಎಸ್. ಕಮ್ಮಾರ, ಸೋಮು ಅಗಸಿಮನಿ, ಸಂಗಮೇಶ ಭಾವಿಕಟ್ಟಿ, ಆತ್ಮಾನಂದ ಸತ್ಯನ್ನವರ, ಅಮಿತ ಕಲ್ಯಾಣಶಟ್ಟರ, ಸಿ.ಸಿ. ಹಿರೇಮಠ, ಶಿಕ್ಷಕರಾದ ಸಿದ್ದು ಪಿ.ಹಿರೇಮಠ, ವಿನಾಯಕ ಬಿಸಲಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಪಾಲ್ಗೊಂಡು ನುಡಿನಮನ ಸಲ್ಲಿಸಿದರು.
ಧಾರವಾಡ ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಮಾತನಾಡಿ, ಧಾರವಾಡದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅವರು ತೋರುತ್ತಿದ್ದ ಕಾರ್ಯಕ್ಷಮತೆ ಮತ್ತು ಜನಪರ ಕಾಳಜಿ ಇಂದಿಗೂ ಸ್ಮರಣೀಯವಾಗಿದೆ. ಉನ್ನತ ಹುದ್ದೆಯಲ್ಲಿದ್ದರೂ ಅಹಂಕಾರವಿಲ್ಲದೆ, ಎಲ್ಲರೊಂದಿಗೂ ಬೆರೆಯುವ ಅವರ ಗುಣ ಅವರನ್ನು ಉತ್ತಮ ಅಧಿಕಾರಿಯನ್ನಾಗಿ ಮಾಡಿತ್ತು ಎಂದು ತಿಳಿಸಿದರು.



