ನೆಲಮಂಗಲ:- ಅಪರಿಚಿತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಳೆದ ಕೆಲವು ದಿನಗಳ ಹಿಂದೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸವರಾಜು (28) ಕೊಲೆಯಾದ ವ್ಯಕ್ತಿ. ಪ್ರಕರಣ ಸಂಬಂಧ ಬಸವರಾಜು ಪತ್ನಿ ಶರಣಮ್ಮ(25), ಪ್ರಿಯಕರ ವೀರಭದ್ರ (19) ಮತ್ತು ಅನಿಲ್ ಎಂಬಾತನನ್ನು ಬಂಧಿಸಲಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತಿಯನ್ನೇ ಪತ್ನಿ ಕೊಲೆ ಮಾಡಿಸಿರೋದು ತನಿಖೆ ವೇಳೆ ಬಯಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದ ಬಸವರಾಜು, ಶರಣಮ್ಮ ದಂಪತಿ ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆರೋಪಿಗಳಲ್ಲಿ ಓರ್ವನಾದ ವೀರಭದ್ರ ತಂದೆ ಬಳಿ ಈ ದಂಪತಿ ಗಾರೆ ಕೆಲಸ ಮಾಡಿಕೊಂಡಿದ್ದು, ವೀರಭದ್ರ ಕೆಲಸಗಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ವೀರಭದ್ರ ಮತ್ತು ಶರಣಮ್ಮ ನಡುವೆ ಸಲುಗೆ ಬೆಳೆದಿದೆ. ಆ ಸಲುಗೆ ಅಕ್ರಮ ಸಂಬಂಧದ ವರೆಗೆ ಹೋಗಿದೆ.
ಹೀಗಾಗಿ ನ.19ರಂದು ಮದ್ಯ ಸೇವಿಸಿ ಬಸವರಾಜು ಮಲಗಿದ್ದ ವೇಳೆ ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ಶರಣಮ್ಮ ಕೊಲ್ಲಿಸಿದ್ದಾಳೆ. ತಲೆ ಮೇಲೆ ಕಲ್ಲು ಎತ್ತಿಹಾಕಿ, ನಂತರ ನೇಣು ಬಿಗಿದು ಬರ್ಬರವಾಗಿ ಬಸವರಾಜು ಕೊಲೆ ಮಾಡಲಾಗಿದೆ. ಬಳಿಕ ಶವವನ್ನ ಗಂಗೊಂಡಹಳ್ಳಿ ನಿರ್ಜನ ಪ್ರದೇಶಕ್ಕೆ ಆರೋಪಿಗಳು ಸಾಗಿಸಿದ್ದು, ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ.
ಆರೋಪಿಗಳು ಮೃತದೇಹ ಸಾಗಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೇ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


