ಮಹಾಭಾರತದಲ್ಲಿ ‘ಕರ್ಣ’ನ ಪಾತ್ರದಲ್ಲಿ ನಟಿಸಿ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ನಟ ಪಂಕಜ್ ಧೀರ್ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ 68ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಹಿಂದಿಯ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಪಂಕಜ್ ವಿಷ್ಣುವರ್ಧನ್ ಜೊತೆಗೆ ಎರಡು ಕನ್ನಡ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ವಿಷ್ಣುವರ್ಧನ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದ ‘ವಿಷ್ಣು-ವಿಜಯ’ ಸಿನಿಮಾನಲ್ಲಿ ಪಂಕಜ್ ಧೀರ್ ಅವರು ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ 2005 ರಲ್ಲಿ ಬಿಡುಗಡೆ ಆದ ‘ವಿಷ್ಣುಸೇನ’ ಸಿನಿಮಾನಲ್ಲಿಯೂ ಸಹ ಡಿಸಿಪಿ ಸಮರ್ಜೀತ್ ಸಿಂಗ್ ಪಾತ್ರದಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ ‘ಬರ’ ಸಿನಿಮಾನಲ್ಲಿಯೂ ಪಂಕಜ್ ನಟಿಸಿದ್ದಾರೆ. ‘ಬರ’ ಸಿನಿಮಾಎಂಎಸ್ ಸತ್ಯು ನಿರ್ದೇಶಿಸಿದ್ದರು. ಅನಂತ್ ನಾಗ್ ನಾಯಕನಾಗಿ ಕಾಣಿಸಿಕೊಂಡಿದ್ದರು.
ನಟನೆ ಮಾತ್ರವಲ್ಲದೆ, ಪಂಕಜ್ ಧೀರ್ ಅವರು ಚಲನಚಿತ್ರ ನಿರ್ಮಾಣದಲ್ಲೂ ಸಕ್ರಿಯರಾಗಿದ್ದರು. ತಮ್ಮ ಸಹೋದರ ಸತ್ಲುಜ್ ಧೀರ್ ಜೊತೆ ಸೇರಿ ಮುಂಬೈನಲ್ಲಿ ‘ವಿಸೇಜ್ ಸ್ಟುಡಿಯೋಜ್’ ಎಂಬ ಶೂಟಿಂಗ್ ಸ್ಟುಡಿಯೋವನ್ನು ಸ್ಥಾಪಿಸಿದ್ದರು. ಅಲ್ಲದೆ, 2010ರಲ್ಲಿ ಮಹತ್ವಾಕಾಂಕ್ಷಿ ನಟರಿಗಾಗಿ ‘ಅಭಿನಯ್ ಆಕ್ಟಿಂಗ್ ಅಕಾಡೆಮಿ’ಯನ್ನು ಪ್ರಾರಂಭಿಸಿ, ಅನೇಕರಿಗೆ ಮಾರ್ಗದರ್ಶನ ನೀಡಿದ್ದರು. ಪಂಕಜ್ ಧೀರ್ ಅವರ ಪುತ್ರ ನಿಕಿತಿನ್ ಧೀರ್ ಸಹ ನಟರಾಗಿದ್ದು ಹಿಂದಿ, ತೆಲುಗು, ಕನ್ನಡದ ಕೆಲ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದಲ್ಲಿ ನಿಕಿತಿನ್ ನಟಿಸಿದ್ದಾರೆ.