ವಿಜಯಸಾಕ್ಷಿ ಸುದ್ದಿ, ಗದಗ : ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪಂಚಾಕ್ಷರಿ ಗವಾಯಿಗಳವರ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೆಯ ಅಂಗವಾಗಿ ಬುಧವಾರ ಸಂಜೆ ಉಭಯ ಶ್ರೀಗಳ ಮಹಾರಥೋತ್ಸವ ಜರುಗಿತು.
ಉಭಯ ಶ್ರೀಗಳ ಬೆಳ್ಳಿ ಮೂರ್ತಿಗಳನ್ನು ಗದ್ದುಗೆಯಿಂದ ಮಹಾತೇರಿನವರೆಗೆ ಮೆರವಣಿಗೆ ಮೂಲಕ ಸಾಗಿ ಬರುವಾಗ ಶ್ರೀಗುರು ಪಂಚಾಕ್ಷರಿ ಗವಾಯಿಗಳವರ ನಾಮಾವಳಿಗಳನ್ನು ಅಶ್ರಮದ ವಿದ್ಯಾರ್ಥಿಗಳು ಪಠಿಸಿದರು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ರಥೋತ್ಸವದ ಉದ್ದಗಲಕ್ಕೂ ಶ್ರೀಗುರು ಹಾನಗಲ್ ಕುಮಾರೇಶ್ವರ ಶ್ರೀಗಳು, ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರಿಗೆ ಜಯಘೋಷಗಳನ್ನು ಹೇಳುತ್ತ ಮುಂದೆ ಸಾಗಿದರು.
ರಥೋತ್ಸವದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಪೂಜ್ಯಶ್ರೀ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ಅಡ್ನೂರ ದಾಸೋಹ ಶ್ರೀಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಹಾಗೂ ಹರ-ಗುರು-ಚರ ಮೂರ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು.