ವಿಜಯಸಾಕ್ಷಿ ಸುದ್ದಿ, ರೋಣ: ಆದಿಕವಿ ಮಹರ್ಷಿ ವಾಲ್ಮೀಕಿ ಮಹಾಋಷಿಗಳ ಜಯಂತ್ಯುತ್ಸವವನ್ನು ಅ. 7ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ತಳವಾರ ಹೇಳಿದರು.
ಅವರು ಶನಿವಾರ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿಣ ಜರುಗಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರ ನಿಗದಿಪಡಿಸಿದಂತೆ ಅ. 7ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸಮಾಜದ ಯುವಕರು ಮತ್ತು ಮುಖಂಡರು ನಿರ್ಧರಿಸಿದ್ದಾರೆ. ಅದೇ ದಿನ ಸಮಾಜದ ವತಿಯಿಂದ ಜಯಂತ್ಯುತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ತಹಸೀಲ್ದಾರ ನಾಗರಾಜ ಕೆ ಮಾತನಾಡಿ, ಸರಕಾರ ನಿಗದಿಪಡಿಸಿದ ದಿನದಂದು ತಾಲೂಕಾ ಮಟ್ಟದ ವಿವಿಧ ಇಲಾಖೆಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅಧಿಕಾರಿಗಳು ತಹಸೀಲ್ದಾರ ಕಚೇರಿಗೆ ಆಗಮಿಸುತ್ತಾರೆ. ಇಲ್ಲಿ ತಾಲೂಕಾಡಳಿತದಿಂದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿಯೂ ಸಮಾಜದ ಬಂಧುಗಳು ಮತ್ತು ನಾಗರಿಕರು ಪಾಲ್ಗೊಳ್ಳಬೇಕು. ಸಮಾಜದವರ ಇಚ್ಛೆಯಂತೆ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕಾಡಳಿತ ಸಹಕಾರ ನೀಡಲಿದೆ ಎಂದರು.
ತಾ.ಪಂ ಇಒ ಚಂದ್ರಶೇಖರ ಕಂದಕೂರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ ಆಲೂರ, ಆರ್.ಎಲ್. ನಾಯಕರ, ಡಾ. ಬಿ.ಎಸ್. ಭಜಂತ್ರಿ, ಕುಮಾರ ಗೌಡನ್ನವರ, ಸಂತೋಷ ಕಡಿವಾಲ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.