ಗುಜರಾತ್: ಮಹಾವೀರ್ ಜಯಂತಿ ಅಂಗವಾಗಿ ಗಾಂಧಿನಗರದಲ್ಲಿರುವ ಮಹಾವೀರ ಜೈನ ಆರಾಧನಾ ಕೇಂದ್ರದ ಆವರಣದ ಕೋಬಾ ತೀರ್ಥದಲ್ಲಿ ನಿರ್ಮಾಣಗೊಂಡ ಸಾಮ್ರಾಟ್ ಸಂಪ್ರತಿ ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.
ಅಶೋಕನ ಮೊಮ್ಮಗ ಸಾಮ್ರಾಟ್ ಸಂಪ್ರತಿ ಅವರ ಹೆಸರಿನಲ್ಲಿ ಈ ವಸ್ತುಸಂಗ್ರಹಾಲಯಕ್ಕೆ ನಾಮಕರಣ ಮಾಡಲಾಗಿದ್ದು, ಜೈನ ಧರ್ಮದ ಸಮೃದ್ಧ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಇಲ್ಲಿ ಪರಿಚಯಿಸಲಾಗಿದೆ. ಸಂಗ್ರಹಾಲಯದಲ್ಲಿ ಪ್ರಾಚೀನ ಹಸ್ತಪ್ರತಿಗಳು, ವಿಗ್ರಹಗಳು, ಚಿತ್ರಗಳು ಹಾಗೂ ಸಾಂಪ್ರದಾಯಿಕ ಅವಶೇಷಗಳು ಸೇರಿದಂತೆ 2,000ಕ್ಕೂ ಹೆಚ್ಚು ಅಪರೂಪದ ಕಲಾಕೃತಿಗಳು ಪ್ರದರ್ಶನಕ್ಕಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಸಂಗ್ರಹಾಲಯವು ಭಾರತಕ್ಕೆ ಮಾತ್ರವಲ್ಲದೆ ಮಾನವಕುಲಕ್ಕೂ ಮಹತ್ವಪೂರ್ಣವಾಗಿದೆ ಎಂದು ಹೇಳಿದರು. ಇದು ಕೋಟ್ಯಂತರ ಭಾರತೀಯರ ಪರಂಪರೆಯ ಪ್ರತೀಕವಾಗಿದ್ದು, ಅಹಿಂಸೆ ಮತ್ತು ಸತ್ಯದ ಸಂದೇಶವನ್ನು ಸಾರಿದ ಸಾಮ್ರಾಟ್ ಸಂಪ್ರತಿ ಅವರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಇದೇ ವೇಳೆ, ಈ ವಸ್ತುಸಂಗ್ರಹಾಲಯವನ್ನು ಭವ್ಯ ಭಾರತದ ಗುರುತನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿ ಭೇಟಿ ನೀಡುವವರು ಜೈನ ಧರ್ಮದ ಮೌಲ್ಯಗಳನ್ನು ಜಗತ್ತಿನಾದ್ಯಂತ ಹರಡಲಿ ಎಂದು ಆಶಿಸಿದರು.



