ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಸಮಸ್ತ ಜೈನ ಸಮಾಜ ಬಾಂಧವರು ಗುರುವಾರ ಭಗವಾನ್ ಮಹಾವೀರ ಜಯಂತಿಯನ್ನು ಶೃದ್ಧಾಭಕ್ತಿಯೊಂದಿಗೆ ಆಚರಿಸಿದರು.
ನಗರದ ಮುಳಗುಂದ ನಾಕಾ ಬಳಿ ಇರುವ ಭಗವಾನ್ ಮಹಾವೀರ ಸ್ತೂಪದ ಹತ್ತಿರ ಜೈನ ಮುನಿಗಳಾದ ರಾಷ್ಟ್ರಸಂತ ಕಮಲಮುನಿ, ಘನಶ್ಯಾಮ್ಮುನಿ, ಕೌಶಲಮುನಿ, ಅಕ್ಷತ್ಮುನಿ, ಸಕ್ಸಮ್ಮುನಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಭಗವಾನ್ ಮಹಾವೀರರ ಭಾವಚಿತ್ರವುಳ್ಳ ಅಲಂಕೃತ ವಾಹನದ ಮೆರವಣಿಗೆ ಹಾಗೂ ಪಾಲಕಿಯು ಸಕಲ ವಾದ್ಯ ವೈಭವದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಳಸಾಪೂರ ರಸ್ತೆಯ ಪಾಂಜರಪೋಳದ ಗೋಶಾಲಾ ಆವರಣಕ್ಕೆ ಆಗಮಿಸಿ ಧರ್ಮಸಭೆಯಾಗಿ ಮಾರ್ಪಟ್ಟಿತು.
ಮೆರವಣಿಗೆಯಲ್ಲಿ ಶ್ವೇತಾಂಬರ ಮೂರ್ತಿ ಪೂಜಕ ಸಂಘ, ವರ್ಧಮಾನ ಸ್ಥಾನಿಕವಾಸಿ ಸಂಘ, ಜೈನ್ ತೇರಾಪಂಥ ಸಭಾ, ಶ್ರೀ ಕಚ್ಚಿದಾಸ್ ಓಸ್ವಾಲ ಜೈನ್ ಸಂಘ, ದಿಗಂಬರ ಜೈನ್ ಸಂಘ, ಗುಜರಾತಿ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.