ವಿಜಯಸಾಕ್ಷಿ ಸುದ್ದಿ, ನರಗುಂದ: ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಸಂಪಾದನೆಗೆ ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗಗಳನ್ನು ಗ್ರಂಥಾಲಯ ಒದಗಿಸುತ್ತದೆ. ಯುವಕರು, ಗ್ರಾಮಸ್ಥರು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ತಾಲೂಕಿನ ಬೆನಕನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ನೂತನ ಉಪ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಗ್ರಂಥಾಲಯ ತೆರೆದಿರುವುದರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಇತರೆ ಪುಸ್ತಕಗಳನ್ನು ಓದುವುದಕ್ಕೆ ಸಹಕಾರಿಯಾಗಿದೆ. ಜತೆಗೆ ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಪುಸ್ತಕ ಓದುವ, ಓದಿದ್ದನ್ನು ಮನನ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಈ ವೇಳೆ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರು ನೂತನ ಗ್ರಂಥಾಲಯಕ್ಕೆ ಜಾಗವಿದ್ದು, ಸ್ವಂತ ಕಟ್ಟಡ ನಿರ್ಮಿಸಿಕೊಡಲು ಮನವಿ ಮಾಡಿದರು. ಪ್ರಸಕ್ತ ವರ್ಷದಲ್ಲಿ ತಾ.ಪಂ ಅನುದಾನದ ಕ್ರಿಯಾಯೋಜನೆ ಈಗಾಗಲೇ ಅನುಮೋದನೆಯಾಗಿದೆ. ಮುಂದಿನ ವರ್ಷದ ಕ್ರಿಯಾಯೋಜನೆಯಲ್ಲಿ ಇಟ್ಟು ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶಾಂತವ್ವ ಕೊವಿ, ಉಪಾಧ್ಯಕ್ಷರಾದ ಪಾರ್ವತೆವ್ವ ಮಾದರ, ಸದಸ್ಯರಾದ ಸಿದ್ದಣ್ಣ ಅಂಗಡಿ, ನಾಗನಗೌಡ ಪೊಲೀಸ್ಪಾಟೀಲ, ವೀರಪ್ಪ ನಾಯ್ಕರ್, ಮುಖಂಡರಾದ ಸಿ.ಕೆ. ರಾಚನಗೌಡ್ರ, ಬಸಪ್ಪ ಭೂಮಣ್ಣನವರ, ಸಿದ್ದನಗೌಡ ಚನ್ನಪ್ಪಗೌಡ್ರ, ಪಿಡಿಒ ಎಲ್.ಬಿ. ಕಲ್ಲಾಪೂರ, ಕಾರ್ಯದರ್ಶಿ, ಶರಣಪ್ಪ ಬಾರಕೇರ್, ಪಂಚಾಯತ್ ಸಿಬ್ಬಂದಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.



