ವಿಜಯಸಾಕ್ಷಿ ಸುದ್ದಿ, ಗದಗ: ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆಗಳಾಗಿವೆ. ಗ್ಯಾರಂಟಿ ಸಮಿತಿ ಸದಸ್ಯರು ಅಧಿಕಾರಿಗಳು ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಬಂಗಾರವಾಗಿಸಬೇಕೆಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕೋರ್ಟ್ ಹಾಲ್ನಲ್ಲಿ ಸೋಮವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ 1 ಕೋಟಿ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಬಡತನ ರೇಖೆಗಿಂತ ಮೇಲೆತ್ತಲಾಗಿದೆ. ಪ್ರತಿ ಕುಟುಂಬಕ್ಕೆ ಪಂಚ ಗ್ಯಾರಂಟಿಗಳಿಂದಾಗಿ ವಾರ್ಷಿಕ 60,000 ರೂ. ದೊರೆಯುತ್ತದೆ. ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿ ಅನುಷ್ಟಾನಕ್ಕೆ 58 ಸಾವಿರ ಕೋಟಿ ರೂ ಮೀಸಲಿಡುವ ಮೂಲಕ ಬಡವರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ ಎಂದರು.
ಸರ್ಕಾರ ಹಣ ನೇರವಾಗಿ ಫಲಾನುಭವಿಗಳಿಗೆ ಎಲ್ಲಿಯೂ ಸೋರಿಕೆ ಆಗದಂತೆ ತಲುಪಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿವೆ. ನೇರ ನಗದು ವರ್ಗಾವಣೆಯು ಮೂಲಕ ಪಾರದರ್ಶಕ ಆಡಳಿತ ಒದಗಿಸಿದೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ನಡೆಯುತ್ತವೆ. ಯಾವುದೂ ನಿಲ್ಲುವುದಿಲ್ಲ. ಕೆಲವರು ರಾಜಕೀಯ ಅಪಪ್ರಚಾರ ನಡೆಸಿದ್ದು, ಇದಕ್ಕೆ ಯಾರೊಬ್ಬರೂ ಕಿವಿಗೊಡಬೇಡಿ ಎಂದು ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್ ಮಾತನಾಡಿ, ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಾಗ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಅಕ್ಟೋಬರ್ 2024ರವರೆಗೆ ಜಿಲ್ಲೆಯಲ್ಲಿ 248525 ನೊಂದಣಿಯಾದ ಅರ್ಜಿಗಳ ಪೈಕಿ 244398 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ ವಾಕರಸಾ ಸಂಸ್ಥೆಯಿAದ ಶಕ್ತಿ ಯೋಜನೆಯಡಿ ದಿ: 11-6-2023ರಿಂದ 20-1-2025ರವರೆಗೆ 83051736 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದು,ಸಂಸ್ಥೆಗೆ 259.25 ಕೋಟಿ ರೂ. ಆದಾಯವಾಗಿದೆ.
ಗೃಹಜ್ಯೋತಿ ಯೋಜನೆಗೆ ಗದಗ ಜಿಲ್ಲೆಯಲ್ಲಿ ಆಗಸ್ಟ್ 2023ರಿಂದ ಡಿಸೆಂಬರ್ 2024ರವರೆಗೆ 13843.37 ಲಕ್ಷ ರೂ. ಬಿಡುಗಡೆಯಾಗಿದ್ದು, 75335 ಸ್ಥಾವರಗಳು ಅರ್ಹವಿದ್ದು ಡಿಸೆಂಬರ್ 2024ರವರೆಗೆ 272590 ಸ್ಥಾವರಗಳ ನೊಂದಣಿಯಾಗಿದೆ.
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಿಂದ 31-12-2024ರವರೆಗೆ ಒಟ್ಟು ಸ್ವೀಕೃತಗೊಂಡ 3811 ಅರ್ಜಿಗಳ ಪೈಕಿ ಡಿಸೆಂಬರ್ 2024ರವರೆಗೆ 2472 ಅರ್ಜಿಗಳಿಗೆ ಅನುದಾನ ಮಂಜೂರಾಗಿದ್ದು, ಬಾಕಿ 1339 ಅರ್ಜಿಗಳ ಮಂಜೂರಾತಿ ಹಂತ ಹಂತವಾಗಿ ಆಗುತ್ತವೆ. ಯುವನಿಧಿ ಫಲಾನುಭವಿಗಳಿಗೆ ಡಿಸೆಂಬರ್ 2024ರಲ್ಲಿ 73,47,000 ರೂ. ಡಿ.ಬಿ.ಟಿ ಮೂಲಕ ಹಣ ವರ್ಗಾಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ 2024ರ ಮಾಹೆಯಲ್ಲಿ ಜಿಲ್ಲೆಯಲ್ಲಿ 226152 ಪಡಿತರ ಕಾರ್ಡುದಾರರಿಗೆ ಡಿ.ಬಿ.ಟಿ. ಮೂಲಕ 123580820 ರೂ. ಹಣ ಸಂದಾಯಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ನೀಲಮ್ಮ ಬೋಳನವರ, ಹೇಮಂತಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಪಿ.ಬಿ. ಅಗಳವಾಡಿ, ದೀಪಕ ಲಮಾಣಿ, ಸದಸ್ಯರಾದ ಅಶೋಕ ಮಂದಾಲಿ, ರೂಪಾ ಅಂಗಡಿ, ಶಿವನಗೌಡ ಪಾಟೀಲ, ಶರೀಫ ಬಿಳೆಎಲಿ, ಬಸವರಾಜ ಬೆಳದಡಿ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ವಿರೂಪಾಕ್ಷ ಯಾರಸಿ, ಈಶಣ್ಣ ಹುಣಸೀಕಟ್ಟಿ, ರಾಜೀವ ಕುಂಬಿ, ಗೀತಾ ಬೀರಣ್ಣವರ, ವೀರಯ್ಯ ಮಠಪತಿ, ಫಕ್ರುಸಾಬ ಚಿಕ್ಕಮಣ್ಣೂರ, ಆರ್.ಆರ್. ಗಡ್ಡದ್ದೇವರಮಠ ಪಾಲ್ಗೊಂಡು ಅನುಷ್ಠಾನ ಕುರಿತಂತೆ ಇರುವ ತಾಂತ್ರಿಕ ತೊಂದರೆಗಳ ಕುರಿತು ಚರ್ಚಿಸಿದರು.
ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿತರಣೆಗೆ ಸಮಸ್ಯೆಗಳೇನಾದರೂ ಇದ್ದಲ್ಲಿ ತಾಲೂಕಾಧ್ಯಕ್ಷರ ಗಮನಕ್ಕೆ ತರಬೇಕು. ಅನುಷ್ಠಾನ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ತಾಲೂಕು ಮಟ್ಟದಲ್ಲಿಯೂ ಸಹ ಸಭೆ ನಿಯಮಿತವಾಗಿ ನಡೆಸಬೇಕು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿಯೂ ಕಡ್ಡಾಯವಾಗಿ ಹಾಜರಾಗಬೇಕು.
– ಬಿ.ಬಿ. ಅಸೂಟಿ.
ಅಧ್ಯಕ್ಷರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ.
ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಲ್ಲಿ ಜಿಲ್ಲೆಯ ಹಲವಾರು ಫಲಾನುಭವಿಗಳು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದ ಸಹಾಯಧನದಡಿ ಸ್ವಉದ್ಯೋಗ ಕೈಗೊಳ್ಳಲು ಬಳಸಿಕೊಂಡಿರುವುದು ಹೆಮ್ಮೆ ತಂದಿದೆ. ಸಮಿತಿ ಸದಸ್ಯರು ಗ್ಯಾರಂಟಿ ಯೋಜನೆಗಳನ್ನು ಅರ್ಹರಿರುವವರಿಗೆ ಕೊಡಿಸಬೇಕು. ಇದರಿಂದ ಜನರ ಪ್ರೀತಿ, ವಿಶ್ವಾಸ, ಗೌರವ ಇಮ್ಮಡಿಗೊಳ್ಳುವ ಮೂಲಕ ನಿಮಗೆ ನಿರಂತರವಾಗಿ ಸಹಕಾರ ನೀಡುತ್ತಾರೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.