ವಿಜಯಸಾಕ್ಷಿ ಸುದ್ದಿ, ಧಾರವಾಡ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ-2025 ಸಮನ್ವಯ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಧಾರವಾಡ ಜಿಲ್ಲೆಯಾದ್ಯಂತ ನವೆಂಬರ್ 24ರಿಂದ ಡಿಸೆಂಬರ್ 9ರವರೆಗೆ ಅಭಿಯಾನ ರೂಪದಲ್ಲಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಭೆಯಲ್ಲಿ ಸೂಚಿಸಿದರು.
ಕಳೆದ 5 ವರ್ಷಗಳಲ್ಲಿ ಕುಷ್ಠರೋಗ ಪ್ರಕರಣಗಳು ಕಂಡುಬಂದ ಗ್ರಾಮ, ವಾರ್ಡ್ಗಳನ್ನು ಆಯ್ದುಕೊಂಡು ಸಮೀಕ್ಷೆ ಮಾಡುತ್ತಿದ್ದು, ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನೊಳಗೊಂಡು ಜಿಲ್ಲೆಯಾದ್ಯಂತ ಒಟ್ಟು 1,114 ತಂಡಗಳನ್ನು ರಚಿಸಿ, 13,76,418 ಜನಸಂಖ್ಯೆಯನ್ನು ಸಮೀಕ್ಷೆಗೊಳಪಡಿಸಲು ಯೋಜಿಸಲಾಗಿದೆ. ಸಮೀಕ್ಷೆಯ ಪ್ರತಿ ತಂಡದಲ್ಲಿ ಒಬ್ಬ ಮಹಿಳಾ ಸ್ವಯಂಸೇವಕರು ಹಾಗೂ ಒಬ್ಬ ಪುರುಷ ಸ್ವಯಂಸೇವಕರು ಕಾರ್ಯನಿರ್ವಹಿಸುವರು.
ಮನೆ-ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ನಾಗರಿಕರನ್ನು ಪರೀಕ್ಷಿಸಲು ಯೋಜಿಸಲಾಗಿದೆ. ಸಮೀಕ್ಷೆಯಲ್ಲಿ ಕುಷ್ಠರೋಗಿಗಳನ್ನು ಕಂಡುಹಿಡಿದು ಭಾರತ ಸರ್ಕಾರದ ಗುರಿಯಂತೆ ಜಿಲ್ಲೆಯನ್ನು ಕುಷ್ಠ ಮುಕ್ತವನ್ನಾಗಿಸಲು ಪಣತೊಡಲು ಎಲ್ಲ ಇಲಾಖೆಗಳೂ ಸಹಭಾಗಿತ್ವ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿ, ಈ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.



