ವಿಜಯಸಾಕ್ಷಿ ಸುದ್ದಿ, ಗದಗ: ಸ್ವಸ್ಥ ನಾರಿ–ಸಶಕ್ತ ಪರಿವಾರ ಒಂದು ಉಪಯುಕ್ತ ಆರೋಗ್ಯ ಅಭಿಯಾನವಾಗಿದ್ದು, ಇದರ ಸದುಪಯೋಗವನ್ನ ಮಹಿಳೆಯರೆಲ್ಲರೂ ಪಡೆಯಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜಯಪುರ ವಲಯದ ಸಮೀಕ್ಷಾ ಆರೋಗ್ಯ ಅಧಿಕಾರಿ ಡಾ. ಮುಕುಂದ ಗಲಗಲಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಮುದಾಯ ಆರೋಗ್ಯ ಕೇಂದ್ರ ಬೆಟಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಟಗೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸ್ವಸ್ಥ ನಾರಿ–ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಪ್ರೀತ್ ಖೋನಾ ಮಾತನಾಡಿ, ಇದೊಂದು ಉತ್ತಮ ಅವಕಾಶವಾಗಿದ್ದು, ಈ ಅಭಿಯಾನದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ಜೊತೆಗೆ ಮಧುಮೇಹ, ಕ್ಯಾನ್ಸರ್, ಕ್ಷಯ ಮುಂತಾದ ರೋಗಗಳ ಕುರಿತು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್ ಕಬ್ಬರಿಗೆ ವಹಿಸಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಲಿಂಗದಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ರಾಮಗಿರಿ ವಂದಿಸಿದರು. ವೇದಿಕೆಯ ಮೇಲೆ ತಜ್ಞ ವೈದ್ಯರುಗಳಾದ ಡಾ. ಸಚಿನ್, ಡಾ. ರಾಘವೇಂದ್ರ, ಡಾ. ಶ್ರೀದೇವಿ, ಡಾ. ಓಂಕಾರ್, ಡಾ. ಮಂಜುನಾಥ್, ಡಾ. ಪ್ರವೀಣ್, ಡಾ. ಸ್ಪರ್ಷಾ ಚನ್ನಪ್ಪಗೌಡರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈ.ವೈ. ಹಕ್ಕಿ, ಎಸ್.ಬಿ. ಗಡಾದ, ಶ್ವೇತಾ ದೇಸಾಯಿ, ಮಂಜುನಾಥ್ ಭಂಡಾರಿ, ಸುನಂದ ಶಿಶುವಿನಹಳ್ಳಿ, ಶಕುಂತಲಾ ಎನ್. ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕರಾಗಿ ಆಗಮಿಸಿದ್ದ ಗದಗ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯುತ್ತಮ ಸ್ಥಾನವನ್ನು ಕಲ್ಪಿಸಲಾಗಿದ್ದು, ಮಹಿಳೆ ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದಾಳೆ. ಅವರ ಆರೋಗ್ಯವೇ ತುಂಬಾ ಮುಖ್ಯವಾದುದಾಗಿದೆ. ಕುಟುಂಬದ ಮಹಿಳೆಯರು ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ ಎಂದು ತಿಳಿಸಿ, ಅಭಿಯಾನದ ಉದ್ದೇಶ ಮಹತ್ವವನ್ನ ವಿವರಿಸಿದರು.



