ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ (ಎಲ್.ಸಿ.ಡಿ.ಸಿ.) ಸಮೀಕ್ಷಾ ಕಾರ್ಯಕ್ರಮವನ್ನು ನವೆಂಬರ್ 24ರಿಂದ ಡಿಸೆಂಬರ್ 9ರವರೆಗೆ ನಡೆಸಲಾಗುತ್ತಿದ್ದು, ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಲ್.ಸಿ.ಡಿ.ಸಿ ಕಾರ್ಯಕ್ರಮದ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಬಸ್ರಿಗಿಡ ಮಾತನಾಡಿ, ಜಿಲ್ಲೆಯ ಒಟ್ಟು 120 ಗ್ರಾಮಗಳಲ್ಲಿ ಎಲ್.ಸಿ.ಡಿ.ಸಿ ಸಮೀಕ್ಷೆ ಕೈಗೊಳ್ಳಲಾಗುವುದು. ಎಲ್.ಸಿ.ಡಿ.ಸಿ ಸಮೀಕ್ಷಾ ಕಾರ್ಯಕ್ರಮವನ್ನು ನವೆಂಬರ್ 24ರಿಂದ ಡಿಸೆಂಬರ್ 9ರವರೆಗೆ 14 ದಿನಗಳವರೆಗೆ ರಜಾ ದಿನಗಳನ್ನು ಹೊರತುಪಡಿಸಿ ನಡೆಸಲಾಗುತ್ತಿದೆ. ಒಂದು ಸಾವಿರ ಜನಸಂಖ್ಯೆಗೆ ಒಂದು ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ಒಬ್ಬ ಆಶಾ ಕಾರ್ಯಕರ್ತೆ/ಅಂಗನವಾಡಿ ಕಾರ್ಯಕರ್ತೆ + ಒಬ್ಬ ಪುರುಷ ಸ್ವಯಂಸೇವಕ ಇರುತ್ತಾರೆ. ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಗಾಗಿ 10 ಸಮೀಕ್ಷಾ ತಂಡಗಳಿಗೆ ಓರ್ವರನ್ನು (ಎಚ್.ಐ.ಓ/ಪಿ.ಎಚ್.ಸಿ.ಓ/ಎಸ್.ಎಚ್.ಐ.ಓ/ಎಸ್.ಪಿ.ಎಚ್.ಸಿ.ಓ/ಬಿ.ಎಚ್.ಇ.ಓ) ಮೇಲ್ವಿಚಾರಕರನ್ನಾಗಿ ಕ್ರಿಯಾ ಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 434 ಸಮೀಕ್ಷಾ ತಂಡಗಳ ಹಾಗೂ 57 ಅಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ಕ್ರಿಯಾ ಯೋಜನೆ ರಚಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಎಲ್.ಸಿ.ಡಿ.ಸಿ ಸಮೀಕ್ಷಾ ಕಾರ್ಯಕ್ರಮ ಕುರಿತ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಆರ್.ಸಿ.ಎಚ್ ಅಧಿಕಾರಿ ಡಾ. ಮೀನಾಕ್ಷಿ, ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಡಾ. ಅರುಂಧತಿ ಕುಲಕರ್ಣಿ, ತಾಲೂಕಾ ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಎಲ್.ಸಿ.ಡಿ.ಸಿ ಸಮೀಕ್ಷಾ ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಶಾಲೆಯಲ್ಲಿರುವ ಮಕ್ಕಳ ತಪಾಸಣೆ ಮಾಡಲು ಬಂದಾಗ ಆಯಾ ಶಾಲೆಯ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ತಂಡದವರೊAದಿಗೆ ಸಹಕರಿಸುವಂತೆ ನೋಡಿಕೊಳ್ಳಬೇಕು. ಎಲ್.ಸಿ.ಡಿ.ಸಿ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಗ್ರಾಮ ಪಂಚಾಯತಿಯಿಂದ ಕಸದ ವಿಲೇವಾರಿ ವಾಹನದ ಮುಖಾಂತರ ಮೈಕಿಂಗ್ ಮಾಡುವುದು, ಗ್ರಾಮ ಮಟ್ಟದಲ್ಲಿ ಡಂಗುರ ಸಾರುವ ಮೂಲಕ ಪ್ರಚಾರ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.


