ನವದೆಹಲಿ: ಮಹಿಳೆಯರಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವ ಕಾನೂನು ಜಾರಿಗೆ ತಂದರೆ ಅದು ಮಹಿಳೆಯರ ಉದ್ಯೋಗಾವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ವಕೀಲ ಶೈಲೇಂದ್ರ ಮಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಿಜೆಐ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದಲ್ಲಿ ನಡೆಯಿತು. ಅರ್ಜಿಯಲ್ಲಿ ಮಹಿಳೆಯರಿಗೆ ಸಂಬಳದೊಂದಿಗೆ ಮುಟ್ಟಿನ ರಜೆ ನೀಡುವಂತೆ ರಾಜ್ಯಗಳಿಗೆ ನಿಯಮ ರೂಪಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿತ್ತು.
ವಿಚಾರಣೆ ವೇಳೆ ಪೀಠವು, ಇಂತಹ ಕಾನೂನು ಜಾರಿಗೆ ತಂದರೆ ಮಹಿಳೆಯರು ಪುರುಷರಿಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಎಂಬ ಭಾವನೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿತು. ಉದ್ಯೋಗದಾತರ ಮನೋಭಾವವನ್ನು ಗಮನಿಸಿದರೆ, ಕಡ್ಡಾಯ ರಜೆ ನಿಯಮ ತಂದರೆ ಅವರು ಮಹಿಳೆಯರನ್ನು ನೇಮಿಸಿಕೊಳ್ಳುವುದೇ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋರ್ಟ್ ತಿಳಿಸಿತು.
ಪ್ರತಿ ತಿಂಗಳು ಮುಟ್ಟಿನ ರಜೆಯನ್ನು ಕಾನೂನುಬದ್ಧ ಹಕ್ಕಾಗಿ ಮಾಡುವುದು ಮಹಿಳೆಯರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಖಾಸಗಿ ವಲಯದಲ್ಲಿ ತಿಂಗಳಿಗೆ ಹೆಚ್ಚುವರಿ ರಜೆ ಕಡ್ಡಾಯವಾದರೆ ಉದ್ಯೋಗದಾತರು ಮಹಿಳೆಯರನ್ನು ತಾತ್ಸಾರದಿಂದ ನೋಡುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು.
ಈ ಕಾರಣದಿಂದ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಆದರೆ ಮಹಿಳೆಯರ ಮುಟ್ಟಿನ ಆರೋಗ್ಯದ ಬಗ್ಗೆ ಸೂಕ್ತ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.
ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡುತ್ತಿರುವುದನ್ನು ವಕೀಲರು ಗಮನಕ್ಕೆ ತಂದಾಗ, ಸ್ವಯಂಪ್ರೇರಿತವಾಗಿ ನೀಡುವ ಕ್ರಮ ಉತ್ತಮ ಎಂದು ಕೋರ್ಟ್ ಹೇಳಿತು. ಆದರೆ ಕಾನೂನಿನಲ್ಲಿ ಕಡ್ಡಾಯ ಮಾಡಿದರೆ ಅದು ಮಹಿಳೆಯರ ವೃತ್ತಿಜೀವನಕ್ಕೆ ಹಾನಿ ಉಂಟುಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಅರ್ಜಿದಾರರು ಇದೇ ವಿಷಯದ ಕುರಿತು ಮೂರನೇ ಬಾರಿ ಅರ್ಜಿ ಸಲ್ಲಿಸಿದ್ದು, 2023 ಮತ್ತು 2024ರಲ್ಲಿ ನಡೆದ ಹಿಂದಿನ ವಿಚಾರಣೆಗಳಲ್ಲಿಯೂ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಈ ವಿಷಯವನ್ನು ಪರಿಗಣಿಸಲು ಸೂಚಿಸಿತ್ತು.



