ರಾಯಚೂರು:- ರಾಯಚೂರಿನ ಮಸ್ಕಿ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಜರುಗಿದೆ.
ಶರಣಬಸವ (32) ಮೃತ ದುರ್ದೈವಿ. ಈತ ಮಸ್ಕಿ ತಾಲೂಕಿನ ಪಗಡದಿನ್ನಿ ಕ್ಯಾಂಪ್ನ ನಿವಾಸಿ ಎನ್ನಲಾಗಿದೆ. ಎದೆನೋವಿನಿಂದ ನರಳುತ್ತಿದ್ದ ವ್ಯಕ್ತಿಯನ್ನ ಆತನ ಸ್ನೇಹಿತರು ಚಿಕಿತ್ಸೆಗಾಗಿ ಬೈಕ್ನಲ್ಲಿಯೇ ಮಸ್ಕಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಅಲ್ಲಿದ್ದ ನರ್ಸ್ಗಳು ಆತನಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಕೂಡ ಫಲಕಾರಿಯಾಗಿರಲಿಲ್ಲ.
ಪ್ರಾಣ ಉಳಿಸಲು ಆತನ ಸ್ನೇಹಿತರು, ಸಂಬಂಧಿಕರು ನಾನಾ ಪ್ರಯತ್ನಗಳನ್ನು ಮಾಡಿದ್ದು, ಬಳಿಕ ಆರೋಗ್ಯ ಕೇಂದ್ರದಿಂದ ಸಿಂಧನೂರು ತಾಲೂಕಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನರಳಾಡಿ ಸಾವನ್ನಪ್ಪಿದ್ದಾರೆ.



