ಬೆಂಗಳೂರು: ರೈಲಿನ ಫೂಟ್ಬೋರ್ಡ್ ಬಳಿ ನಿಂತು ಪ್ರಯಾಣಿಸುವಾಗ ಎಷ್ಟು ಜಾಗೃತೆ ವಹಿಸಿದರೂ ಕಮ್ಮಿಯೇ. ಏಕೆಂದರೆ ಕೆಲವೊಮ್ಮೆ ಆಯತಪ್ಪಿ ಬಿದ್ದು ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಈ ಮೊದಲು ಕೂಡಾ ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ, ವೇಗವಾಗಿ ಚಲಿಸುತ್ತಿರುವ ರೈಲನ್ನು ಇಳಿಯಲು ಹೋಗಿ ಕಾಲುಗಳನ್ನು ಕಳೆದುಕೊಂಡವರ, ಪ್ರಾಣವನ್ನು ಕಳೆದುಕೊಂಡವರ ಸುದ್ದಿಗಳನ್ನು ಕೇಳಿರುತ್ತೇವೆ.
ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಸಹಾಯಕ್ಕೆ ಧಾವಿಸಿ ಮಾನವೀಯತೆಯನ್ನೂ ಮೆರೆದವರಿದ್ದಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಚಲಿಸುತ್ತಿದ್ದ ರೈಲು ಹತ್ತುವ ಯತ್ನದಲ್ಲಿ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ಮಾಜಿ ಸೈನಿಕ ಹಾಗೂ ರೈಲ್ವೆ ಇಲಾಖೆಯ ಸಿಬ್ಬಂದಿ ರಕ್ಷಿಸಿದ ಘಟನೆ ಕೆ. ಆರ್. ಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಸಿನಿಮೀಯ ಮಾದರಿಯಲ್ಲಿ ಪ್ರಯಾಣಿಕನನ್ನು ರಕ್ಷಿಸಿರುವ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನಿಂದ ಮಂಗಳೂರು ಮಾರ್ಗದೆಡೆಗೆ ಹೊರಟಿದ್ದ ರೈಲು, ವೇಗ ಪಡೆದುಕೊಂಡಾಗ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದಿದ್ದು, ರೈಲು ಆತನನ್ನು ಎಳೆದುಕೊಂಡೇ ಮುಂದೆ ಸಾಗಿದೆ.
ರೈಲಿನಡಿ ಸಿಲುಕುವಷ್ಟರಲ್ಲಿ ಸ್ಥಳದಲ್ಲಿದ್ದ ಮಾಜಿ ಸೈನಿಕ ಸತೀಶ್ ಮತ್ತು ರೈಲ್ವೆ ಇಲಾಖೆಯ ಸಿಬ್ಬಂದಿ ಪ್ರದೀಪ್ ಕುಮಾರ್ ಪ್ರಯಾಣಿಕನನ್ನು ಪ್ಲಾಟ್ಫಾರ್ಮ್ನತ್ತ ಎಳೆದು ರಕ್ಷಣೆ ಮಾಡಿದ್ದಾರೆ. ಕೂದಲೆಳೆ ಅಂತರದಲ್ಲಿ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.