ವಿಜಯಸಾಕ್ಷಿ ಸುದ್ದಿ, ಗದಗ: ನರೇಗಾ ಯೋಜನೆಯ ಸಮರ್ಪಕ ನಿರ್ವಹಣೆಗೆ ಸರ್ಕಾರದಿಂದ ಕಾಯಕ ಬಂಧು ಎಂಬ ಪರಿಕಲ್ಪನೆಯನ್ನು ರೂಪಿಸಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೆಹಮತ್ಬಾನು ಕೀರೆಸೂರ ಹೇಳಿದರು.
ತಾಲೂಕಿನ ಬಿಂಕದಕಟ್ಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನರೇಗಾ ಕೂಲಿ ಕಾರ್ಮಿಕರಿಗೆ ಇದುವರೆಗೆ ಸಮರ್ಪಕ ಕೂಲಿ ಕೆಲಸ ನೀಡಿದ್ದು, ಯೋಜನೆಯಡಿ ರೈತರು ಸಮುದಾಯ ಕಂದಕ ಬದು ನಿರ್ಮಾಣ, ದನ/ಕುರಿ ಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಮುಂತಾದ ಕಾಮಗಾರಿಗಳಲ್ಲಿ ಸಮಗ್ರವಾಗಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು.
ತಾ.ಪಂ ಐ.ಇ.ಸಿ ಸಂಯೋಜಕರು ಮಾತನಾಡಿ, ಕಾಮಗಾರಿ ಸ್ಥಳದಲ್ಲಿ ಸ್ವಚ್ಛ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ದಾಖಲಾತಿಗಳನ್ನು ಸರಿಯಾಗಿಡಬೇಕು ಎಂದರಲ್ಲದೆ, ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲು ಕರೆ ನೀಡಿದರು.