ಮಂಡ್ಯ: ದೂರು ನೀಡಲು ಬಂದ ವ್ಯಕ್ತಿಯ ಮೇಲೆಯೇ ಮಹಿಳಾ ಪೊಲೀಸ್ ಅಧಿಕಾರಿ ದರ್ಪ ತೋರಿದ್ದಾರೆ ಎಂಬ ಗಂಭೀರ ಆರೋಪ ಕೆ.ಆರ್.ಪೇಟೆ ಪಟ್ಟಣದಲ್ಲಿ ಕೇಳಿಬಂದಿದೆ. ಸರ್ಕಾರ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾತಾಡುತ್ತಿರುವ ನಡುವೆಯೇ, ಅಧಿಕಾರಿಗಳ ದರ್ಪ ಮತ್ತು ದೌರ್ಜನ್ಯ ನಿಲ್ಲುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮರಾಣಿ ವಿರುದ್ಧ ದರ್ಪ ಹಾಗೂ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವೈರಲ್ ವಿಡಿಯೋದಲ್ಲಿ, ನಡು ಬೀದಿಯಲ್ಲೇ ದೂರುದಾರನಿಗೆ ಆವಾಜ್ ಹಾಕಿ ಬೆದರಿಸುತ್ತಿರುವ ದೃಶ್ಯಗಳು ಕಾಣಿಸಿವೆ ಎನ್ನಲಾಗಿದೆ.
ಕೆ.ಆರ್.ಪೇಟೆಯ ಚಂದ್ರಶೇಖರ್ ಎಂಬುವವರು, ತನಗೆ ಇನ್ಸ್ಪೆಕ್ಟರ್ ಸುಮರಾಣಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ನೀಡಲು ಬಂದ ವ್ಯಕ್ತಿಯೊಂದಿಗೆ ಈ ರೀತಿ ಬೇಜಬ್ದಾರಿಯಾಗಿ ವರ್ತಿಸಿದರೆ, ನ್ಯಾಯ ಸಿಗುತ್ತದೆ ಎಂಬ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಹಿಳಾ ಅಧಿಕಾರಿಯ ದರ್ಪ ಮತ್ತು ವರ್ತನೆ ನೋಡಿದರೆ, ಠಾಣೆಗೆ ಬರಲು ನೊಂದವರು ಹೆದರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಚಂದ್ರಶೇಖರ್ ಅವರು ಮಹಿಳಾ ಪೊಲೀಸ್ ಅಧಿಕಾರಿಯ ದರ್ಪದ ವಿರುದ್ಧ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಈ ಬೇಜಬ್ದಾರಿ ಹಾಗೂ ದರ್ಪ ತೋರುವ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.



