ಕೋಲಾರ:- ಯುವಕನೊಂದಿಗೆ ಮಂಗಳಮುಖಿ ಶವ ಪತ್ತೆಯಾಗಿರುವ ಘಟನೆ ಕೋಲಾರ ನಗರದ ಕೀಲುಕೋಟೆ ರೈಲ್ವೇ ಹಳಿಯಲ್ಲಿ ಜರುಗಿದೆ. ಮೃತ ಮಂಗಳಮುಖಿಯನ್ನು ವಸೀಂ ಆಲಿಯಾಸ್ ಅಲಿಯಾ ಎಂದು ಗುರುತಿಸಲಾಗಿದೆ. ಮಂಗಳಮುಖಿ ಪಕ್ಕದಲ್ಲೇ ಮತ್ತೋಬ್ಬ ಅಯಾಜ್ ಎನ್ನುವ ಮೆಕಾನಿಕ್ ಮೃತದೇಹ ಪತ್ತೆಯಾಗಿದೆ.
ಇಬ್ಬರ ಶವಗಳು ಅಕ್ಕಪಕ್ಕದಲ್ಲೇ ಬಿದ್ದಿದ್ದು, ಸ್ಥಳದಲ್ಲೇ ಬೀಯರ್ ಬಾಟಲಿ, ಮದ್ಯದ ಪ್ಯಾಕೇಟ್, ಕಬಾಬ್, ವಿಮಲ್ ಗುಟ್ಕಾ ಪ್ಯಾಕೇಟ್ ಸೇರಿದಂತೆ ಆಲಿಯಾಳ ಕಲೆಕ್ಷನ್ ಆಗಿದ್ದ ಹಣ ಸಹ ರೈಲ್ವೇ ಹಳಿಯಲ್ಲಿ ಬಿದ್ದಿದೆ. ಹೀಗಾಗಿ ಇಬ್ಬರು ಎಣ್ಣೆ ಮತ್ತಿನಲ್ಲಿದ್ದಾಗ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.
ರಾತ್ರಿ ರೈಲ್ವೇ ಹಳಿ ಮೇಲೆ ಆಲಿಯಾ ಹಾಗೂ ಅಯಾಜ್ ಇಬ್ಬರು ಕೆಲಕಾಲ ಛತ್ರಿ ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಚೆನ್ನಾಗಿ ಕುಡಿದು ಮೈಮರೆತಿದ್ದಾರೆ. ಈ ವೇಳೆ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಎನ್ನಲಾಗಿದೆ. ಸದ್ಯ ಅಕ್ಕಪಕ್ಕದಲ್ಲೇ ಇಬ್ಬರ ಶವಗಳು ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.
ಇಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ರಾ? ಅಥವಾ ತಾವೇ ರೈಲಿಗೆ ತಲೆಕೊಟ್ಟ ಆತ್ಮಹತ್ಯೆ ಮಾಡಿಕೊಂಡ್ರಾ? ಇಲ್ಲ ಇದೇನು ಕೊಲೆಯೋ? ಇನ್ನು ಆಲಿಯಾ ಹಾಗೂ ಅಯಾಜ್ ಹೇಗೆ ಪರಿಚಯ ಆಯ್ತು ಹೀಗೆ ಹತ್ತು ಹಲವು ಅನುಮಾನಗಳು ಕಾಡುತ್ತಿದ್ದು, ಏನಾಗಿದೆ ಎನ್ನುವುದೇ ನಿಗೂಢವಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.