ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಒಂದೆಡೆ ಕಿತ್ತು ತಿನ್ನುವ ಬಡತನ, ಅದರೊಂದಿಗೇ ಓದಿ ಸಾಧನೆ ಮಾಡಬೇಕೆಂಬ ಛಲ. ಇದರ ನಡುವೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿರುವ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಮಂಜುನಾಥ ಸಂಕಪ್ಪನವರ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಶೇ. 89ರಷ್ಟು ಅಂಕಗಳನ್ನು ಗಳಿಸಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾನೆ.
ಮಂಜುನಾಥ ಸಮೀಪದ ಯಲವಿಗಿ ಗ್ರಾಮದವನಾಗಿದ್ದು, ಮನೆತನದ ಬಡತನ, ಕಷ್ಟದ ನಡುವೆ ಉತ್ತಮ ಅಂಕಗಳೊಂದಿಗೆ ಎಸ್ಎಸ್ಎಲ್ಸಿ ಪೂರೈಸಿದ್ದಾನೆ. ಆದರೆ ಖಾಸಗಿ ಕಾಲೇಜಿನಲ್ಲಿ ಸೇರಬೇಕೆಂದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದು, ಇದೀಗ ತನ್ನ ಕಷ್ಟದ ನಡುವೆಯೂ ಶೇ.89 ಫಲಿತಾಂಶ ಪಡೆದಿರುವ ಈತ ತನ್ನ ಮುಂದಿನ ಓದಿಗೆ ಅನೂಕೂಲವಾಗಲಿ ಎಂದು ತುಮಕೂರಿನ ಹೋಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಕೆಲಸ ನಿರ್ವಹಿಸುತ್ತಿದ್ದಾನೆ. ಅಲ್ಲದೆ ಅಲ್ಲಿನ ಹೋಟೇಲ್ನವರಿಗೆ ತಾನು ಪಿಯುಸಿ ಓದುತ್ತಿರುವ ಬಗ್ಗೆಯೂ ತಿಳಿಸಿಲ್ಲ. ಫಲಿತಾಂಶ ಪ್ರಕಟವಾದ ಮೇಲೆ ಅವರಿಗೆ ಗೊತ್ತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂದೆ ಪದವಿ ಓದಿ ಯುಪಿಎಸ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಐಎಎಸ್ ಅಧಿಕಾರಿಯಾಗಿ ಸೇವೆ ಮಾಡಬೇಕು ಎಂಬ ಕನಸಿದೆ. ಆದರೆ ನಮ್ಮ ಮನೆಯ ಪರಿಸ್ಥಿತಿಯಲ್ಲಿ ನಾನು ದುಡಿಯಬೇಕಾದ ಅನಿವಾರ್ಯತೆ ಇದೆ. ದುಡಿದಾದರೂ ನನ್ನ ಕನಸನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನನ್ನ ಯಶಸ್ಸಿಗೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ನೀಡಿದ ಬೆಂಬಲ, ತಂದೆ-ತಾಯಿ, ಹಿರಿಯರ ಆಶೀರ್ವಾದ ಕಾರಣ.
– ಮಂಜುನಾಥ,
ಪ್ರತಿಭಾವಂತ ವಿದ್ಯಾರ್ಥಿ.
ಮಂಜುನಾಥ ಸಂಕಪ್ಪನವರ ಕಾಲೇಜು ಸೇರಿದಾಗಿನಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತಿದ್ದ. ಅವನ ನಯ-ವಿನಯದ ಜೊತೆಗೆ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಆತನ ಗುರಿ ಈಡೇರುವಂತಾಗಲಿ.
-ಮಝಜನಾಥ ಕೊಕ್ಕರಗುಂದಿ.
ಪ್ರಾಚಾರ್ಯರು, ಸ.ಪ.ಪೂ ಕಾಲೇಜು, ಲಕ್ಷ್ಮೇಶ್ವರ