ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಸತ್ತ ಬಳಿಕವೂ, ಅವನಂತೆಯೇ ಅರಣ್ಯ ಪ್ರದೇಶದಲ್ಲಿ ಕ್ರೌರ್ಯ ಮೆರೆದ ವ್ಯಕ್ತಿಯಾಗಿ ಗೋವಿಂದ್ ಅಲಿಯಾಸ್ ‘ಮರಿ ವೀರಪ್ಪನ್’ ಹೆಸರು ಕೇಳಿಬಂದಿತ್ತು. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದ ಭೀಕರ ಹುಲಿ ಬೇಟೆ ಪ್ರಕರಣದೊಂದಿಗೆ ಈ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಇದೀಗ ಆತನನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 2025ರಲ್ಲಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಪ್ರದೇಶದಲ್ಲಿ ಹುಲಿಯೊಂದು ವಿಷ ಸೇವಿಸಿ ಸಾವನ್ನಪ್ಪಿತ್ತು. ಬಳಿಕ ಅದರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಕಾಡಿನೊಳಗೆ ಎಸೆದಿದ್ದರು. ಇದು ಕೇವಲ ಬೇಟೆಯಲ್ಲ, ಅರಣ್ಯ ವ್ಯವಸ್ಥೆಯ ಮೇಲಿನ ಸವಾಲು ಹಾಗೂ ಅಧಿಕಾರಿಗಳಿಗೆ ಹಾಕಿದ ಬೆದರಿಕೆ ಎಂದು ಹೇಳಲಾಗಿತ್ತು.
ತನಿಖೆಯಲ್ಲಿ ಗೋವಿಂದ್ ಕಾರ್ಬೊಫ್ಯೂರಾನ್ ವಿಷ ಬಳಸಿ ಹುಲಿ ಹಾಗೂ ಚಿರತೆಗಳನ್ನು ಗುರಿಯಾಗಿಸುತ್ತಿದ್ದಾನೆ ಎಂಬುದು ಬಹಿರಂಗವಾಗಿತ್ತು. ಈ ಪ್ರಕರಣ ಅರಣ್ಯ ಇಲಾಖೆ ಹಾಗೂ ಪೊಲೀಸರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆರೋಪಿಗಳು ಜಾಮೀನಿನಲ್ಲಿ ಹೊರಬಂದರೂ, ಗೋವಿಂದ್ ಮಾತ್ರ ಐದು ತಿಂಗಳ ಕಾಲ ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ.
ಖಚಿತ ಮಾಹಿತಿ ಆಧರಿಸಿ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಕೊನೆಗೂ ಗೋವಿಂದ್ನನ್ನು ಬಂಧಿಸಿದ್ದಾರೆ. ಈ ಬಂಧನವು ಮಲೆ ಮಹದೇಶ್ವರ ವನ್ಯಜೀವಿಧಾಮದ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.



