ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂದು ದಾಂಪತ್ಯಕ್ಕೆ ಕಾಲಿಡುತ್ತಿರುವ ನೂತನ ದಂಪತಿಗಳು ನಿಜಕ್ಕೂ ಶಿವ-ಪಾರ್ವತಿ ಸ್ವರೂಪರು. ಸತಿ ಪತಿಗಳಿಬ್ಬರೂ ಎರಡು ದೇಹ ಒಂದೇ ಮನಸ್ಸು ಎನ್ನುವಂತೆ ಸುಖ ಸಂಸಾರವನ್ನು ನಡೆಸಬೇಕು. ಶರಣ ಸಂಸ್ಕೃತಿಯಲ್ಲಿ ದಾಂಪತ್ಯ ಜೀವನಕ್ಕೆ ಶ್ರೇಷ್ಠ ಸ್ಥಾನವಿದೆ. ದಂಪತಿಗಳು ಸುಖದಿಂದ ಬಾಳಬೇಕು ಎಂದು ಜಿಗೇರಿಯ ಗುರುಸಿದ್ದ ಶಿವಾಚಾರ್ಯರು ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಜರುಗಿದ 24 ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಆಶೀವರ್ಚನ ನೀಡಿದರು.
ವೈವಾಹಿಕ ಜೀವನದಲ್ಲಿ ದಂಪತಿಗಳ ನಡುವೆ ಪರಸ್ಪರ ತಿಳುವಳಿಕೆ, ಹೊಂದಾಣಿಕೆ, ಕಾಳಜಿ ಇದ್ದರೆ ಉತ್ತಮ ಕುಟುಂಬ ನಿರ್ವಹಣೆ, ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಶರಣರ ವಚನ ಸ್ಪೂರ್ತಿ ಗ್ರಂಥಗಳನ್ನು ಪ್ರತಿಯೊಬ್ಬರು ಪ್ರತಿನಿತ್ಯ ಪಠಣೆ ಮಾಡಿ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ನವ ಜೋಡಿಗಳು ನೂರು ಕಾಲ ಸುಂದರವಾದ ಸಂಸಾರವನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಬನವಾಸಿಯ ಶಿವಲಿಂಗ ಸ್ವಾಮೀಜಿ, ಮಹಾತ್ಮಪ್ಪ ಬಸವರಡ್ಡೆರ, ಗುರಣ್ಣ ಅವರಡ್ಡಿ, ಶರಣಯ್ಯ ಅರಳಲಿಮಠ, ಸಂಗಯ್ಯ ಮಠಪತಿ, ಬಸವರಾಜ ಪಲ್ಲೇದ, ಮಲ್ಲಿಕಾರ್ಜುನ ಕಲ್ಲೇಶಾನಿ, ಅಂದಪ್ಪ ವೀರಾಪೂರ, ಮಂಜುನಾಥ ಅಂಗಡಿ, ಬಸವರಾಜ ತಳವಾರ, ಮಹದೇವಪ್ಪ ಬಸವರಡ್ಡೆರ, ಬಸವರಾಜ ಬಾರಕೇರ, ಅಂದಪ್ಪ ಕಲ್ಲೇಶಾನಿ, ಶರಣಪ್ಪ ತಿಪ್ಪಶೆಟ್ಟಿ ಸೇರಿದಂತೆ ಶ್ರೀ ಅನ್ನದಾನೇಶ್ವರ ಸೇವಾ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಧರ್ಮ ಪರಂಪರೆಯಲ್ಲಿ ವಿವಾಹಕ್ಕೆ ತನ್ನದೇ ಆದ ಮಹತ್ತರ ಸ್ಥಾನವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯಿಂದ ವಿವಾಹವು ಅದರ ಮೌಲ್ಯ ಕಳೆದುಕೊಳ್ಳುತ್ತಿದೆ. ನವ ದಂಪತಿಗಳು ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಪರಸ್ಪರ ಹೊಂದಾಣಿಕೆಯಿAದ ಜೀವನ ನಡೆಸಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು ಎಂದರು.