ಮೈಸೂರು: ಹಳೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗುಜರಿಗೆ ಬೆಂಕಿ ಬಿದ್ದ ಪರಿಣಾಮ 12ಕ್ಕೂ ಹೆಚ್ಚು ಗೋದಾಮುಗಳು ಸುಟ್ಟು ಕರಕಲಾದ ಘಟನೆ ಮೈಸೂರು ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ.
ಮೈಸೂರು–ಬೆಂಗಳೂರು ಹೆದ್ದಾರಿ ಸಮೀಪ ಇರುವ ಗುಜರಿಗೆ ಇಂದು ಬೆಳಿಗ್ಗೆ ಸುಮಾರು 3.30ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದೆ. ಗುಜರಿನಲ್ಲಿದ್ದ ಹಳೆ ವಸ್ತುಗಳು ಹಾಗೂ ಸ್ಕ್ರಾಪ್ ಸಾಮಗ್ರಿಗಳಿಂದ ಬೆಂಕಿ ವೇಗವಾಗಿ ಹರಡಿದ್ದು, ಸಾಲುಸಾಲು ಗೋದಾಮುಗಳು ಹೊತ್ತಿ ಉರಿದಿವೆ. ಬೆಳಿಗ್ಗೆ 4.30ರ ವೇಳೆಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಕಿಯ ತೀವ್ರತೆ ಹೆಚ್ಚಿರುವುದರಿಂದ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹಲವು ಗೋದಾಮುಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಘಟನೆ ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.



