ಬೆಂಗಳೂರು: ಕೆ.ಆರ್ ಮಾರ್ಕೆಟ್ ಬಳಿಯ ನಗರ್ತಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮದನ್ (38), ಪತ್ನಿ ಸಂಗೀತಾ (33), ಮಕ್ಕಳು ಮಿತೇಶ್ (8) ಹಾಗೂ ವಿಹಾನ್ (5) ಒಂದೇ ಕುಟುಂಬದ ನಾಲ್ವರು ಬೆಂಕಿಗೆ ಬಲಿಯಾಗಿದ್ದು,
ಮತ್ತೊಂದು ಮಹಡಿಯಲ್ಲಿ ಸುರೇಶ್ ಎಂಬವರೂ ಸುಟ್ಟು ಮೃತಪಟ್ಟಿದ್ದಾರೆ. ಇನ್ನೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾತ್ರಿ 2.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ನೆಲಮಹಡಿಯಲ್ಲಿ ಇರುವ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಮೇಲಿನ ಮಹಡಿಗಳಿಗೆ ಆವರಿಸಿದೆ.
ಕಟ್ಟಡದಲ್ಲಿದ್ದ ಬಹುತೇಕ ಜನರು ತಪ್ಪಿಸಿಕೊಂಡಿದ್ದಾರೆ, ಆದರೆ ಒಂದು ಕುಟುಂಬ ಮಾತ್ರ ಬೆಂಕಿ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ ಎಂದು ಹೇಳಿದರು. ಇದುವರೆಗೆ ಎರಡು ಮೃತದೇಹಗಳನ್ನು ಹೊರತೆಗೆದಿದ್ದೇವೆ. ಮೇಲಿನ ಮಹಡಿಗಳು ಸಂಪೂರ್ಣವಾಗಿ ಬೆಂಕಿ ಮತ್ತು ಹೊಗೆಯಿಂದ ಆವರಿಸಿದ್ದು, ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಒಳಗಡೆ ಇನ್ನೂ ಮೃತದೇಹಗಳು ಇರುವ ಶಂಕೆ ಇದೆ. ಅಗ್ನಿಶಾಮಕ ದಳ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ರಕ್ಷಣಾ ತಂಡ ಕಾರ್ಯಾಚರಣೆ ಮುಂದುವರೆಸಿವೆ” ಎಂದು ಮಾಹಿತಿ ನೀಡಿದರು.