ವಿಜಯಸಾಕ್ಷಿ ಸುದ್ದಿ, ರೋಣ: ನಮ್ಮ ಪೂರ್ವಜರು ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ನೀಡಿರುವ ದಾನದ ಆಸ್ತಿಯನ್ನು ನಾವು ಬಿಟ್ಟು ಕೊಡಲು ಸಾಧ್ಯವಿಲ್ಲ. ಈ ವಿಷಯವಾಗಿ ನಮ್ಮ ಪ್ರಾಣ ಹೊದರೂ ಚಿಂತೆಯಿಲ್ಲ ಎಂದು ಮುಸ್ಲಿಂ ಸಮಾಜದ ಮುಖಂಡ ಇನಾಯತ್ ತರಪದಾರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಅಂಜುಮನ್ ಎ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಅಭಿವೃದ್ಧಿಗೆ ನಮ್ಮ ಪೂರ್ವಜರು ನೀಡಿರುವ ನಮ್ಮ ಆಸ್ತಿಯನ್ನು ಕಬಳಿಸಿ ಅದನ್ನು ಆದಾನಿ-ಅಂಬಾನಿಯವರಿಗೆ ಮಾರಾಟ ಮಾಡುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಮುಸ್ಲಿಂ ಸಮುದಾಯ ವಕ್ಫ್ ಆಸ್ತಿಯನ್ನು ರಕ್ಷಿಸಿಕೊಳ್ಳಲು ಎಲ್ಲ ತ್ಯಾಗಕ್ಕೂ ಸಿದ್ಧವಾಗಿದೆ ಎಂದರು.
ಕಮಿಟಿ ಅಧ್ಯಕ್ಷ ಬಾವಾಸಾಬ ಬೆಟಗೇರಿ ಮಾತನಾಡಿ, ಈ ಪ್ರತಿಭಟನೆ ಸಾಂಕೇತಿಕವಾಗಿದೆ. ನಮಗೆ ನ್ಯಾಯಾಲಯಗಳ ಮೆಲೆ ಭರವಸೆಯಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದ್ದು, ಮುಸ್ಲಿಂ ಸಮಾಜದ ಬಂಧುಗಳು ಶಾಂತತೆಯಿಂದ ಇರಬೇಕು. ನ್ಯಾಯ ಸಿಗದಿದ್ದರೆ ಸಂವಿಧಾನದ ಅಡಿಯಲ್ಲಿ ನಾವು ಹೋರಾಟ ಮಾಡಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಖಲೀಲ ರಾಮದುರ್ಗ ಮಾತನಾಡಿ, ಎನ್ಡಿಎ ನೇತೃತ್ವದ ಕೇಂದ್ರ ಸರಕಾರ ಮುಸ್ಲಿಮರ ಮೆಲೆ ಸದಾ ದಾಳಿ ನಡೆಸುತ್ತಾ ಬಂದಿರುವುದು ಖಂಡನೀಯ. ಇದಲ್ಲದೆ ನಮ್ಮ ಪೂರ್ವಜರು ದಾನ ಮಾಡಿರುವ ಆಸ್ತಿಯನ್ನು ಕೇಂದ್ರ ಸರಕಾರ ನುಂಗಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಕೇಂದ್ರ ಸರಕಾರ ಜೂನ್ ತಿಂಗಳೊಳಗೆ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶಬ್ಬೀರ ಖಾಜಿ, ಶಫೀಕ ಮೂಗನೂರ, ಮಲಿಕ ಯಲಿಗಾರ, ಮಲಿಕ ಕುರ್ತಕೋಟಿ, ಅಬ್ಬು ಹೊಸುರ, ರಿಯಾಜ ಮುಲ್ಲಾ, ಬಾಶಾಸಾಬ ಇಟಗಿ, ಸಮೀರ ದೊಡ್ಡಮನಿ, ಡಿ.ಕೆ. ಮುಲ್ಲಾ, ಮೋಹಿದ್ದಿನ್ ಕುರಹಟ್ಟಿ, ಬಶೀರ ಕಟ್ಟಿಮನಿ, ರಶೀದ ತರಪದಾರ, ತನ್ವೀರ ಚಿನ್ನೂರ, ಬಶೀರ ಕೊಪ್ಪಳ ಸೇರಿದಂತೆ ಮುಸ್ಲಿಂ ಸಮಾಜದವರು ಪಾಲ್ಗೊಂಡಿದ್ದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದ್ದರೂ ರೋಣ ತಹಸೀಲ್ದಾರರು ಮನವಿ ಸ್ವೀಕರಿಸಲು ಬಾರದೆ ಇರುವುದು ಗೊಂದಲಕ್ಕೆ ಕಾರಣವಾಯಿತು. ನಂತರ ಸಮಾಜದ ಮುಖಂಡರು ಯುವಕರಿಗೆ ತಿಳಿ ಹೇಳುವ ಮೂಲಕ ಉಪತಹಸೀಲ್ದಾರ ಜೆ.ಟಿ. ಕೊಪ್ಪದರಿಗೆ ಮನವಿ ಸಲ್ಲಿಸಿದರು.