ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯಾದ್ಯಾಂತ ಬಿಬಿಎಂಪಿ ಸೇರಿದಂತೆ, ಮಹಾನಗರ ಪಾಲಿಕೆ, ನಗರ ಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ ಖಾಸಗಿ ಗುಡಿಸಲು ಪ್ರದೇಶಗಳನ್ನು ಗುರುತಿಸಿ ರಾಜ್ಯ ಸರ್ಕಾರ ತಕ್ಷಣ ಸ್ಲಂ ಕಾಯ್ದೆ 1973ರ ಪ್ರಕಾರ ಘೋಷಣೆ ಮಾಡಿ ಸ್ಥಳೀಯ ನಿವಾಸಿಗಳಿಗೆ ನಾಗರಿಕರ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ಡಿ.13ರಂದು ಬೆಳಗಾವಿಯ ಸುರ್ವಣ ಸೌಧದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಮಾನ್ವಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2023ರ ಸೆಪ್ಟಂಬರ್ನಲ್ಲಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕರ್ನಾಟಕ ರಾಜ್ಯಾದ್ಯಾಂತ, ಕರ್ನಾಟಕ ಕೊಳಚೆ ಪ್ರದೇಶಗಳ, ಅಭಿವೃದ್ಧಿ ಮತ್ತು ನಿರ್ಮೂಲನೆ ಕಾಯಿದೆ 1973ರ ಸೆಕ್ಷನ್-3ರಡಿ ಮತ್ತು 11ರಡಿಯಲ್ಲಿ ಖಾಸಗಿ ಭೂ ಮಾಲೀಕತ್ವದ ಸ್ಲಂಗಳನ್ನು “ಕೊಳಚೆ ಪ್ರದೇಶ”ವೆಂದು ಘೋಷಣೆ ಮಾಡುವಾಗ ಸರ್ಕಾರದ ಅನುಮೋದನೆ ಪಡೆದು ತದನಂತರ ಘೋಷಣೆಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಹೊರಡಿಸಿದ 2 ವರ್ಷಗಳಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡುವುದನ್ನೇ ನಿಲ್ಲಿಸಿದೆ ಎಂದರು.
ಗದಗ ಜಿಲ್ಲಾ ಸ್ಲಂ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಮೌಲಾಸಾಬ ಗಚ್ಚಿ, ಮಕ್ತುಮಸಾಬ ಮುಲ್ಲಾನವರ, ಮಂಜುನಾಥ ಶ್ರೀಗಿರಿ, ಖಾಜಾಸಾಬ ಇಸ್ಮಾಯಿಲನವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೇರೆಲ್ಲ ಉದ್ದೇಶಗಳಿಗೆ ಸಾವಿರಾರೂ ಕೋಟಿ ರೂಗಳನ್ನು ಭೂ ಸ್ವಾಧೀನಕ್ಕೆ ನೀಡುವ ಸರ್ಕಾರ ಸ್ಲಂ ನಿವಾಸಿಗಳ ಭೂಸ್ವಾಧೀನಕ್ಕೆ ಹಣ ನೀಡುತ್ತಿಲ್ಲ. ಹಾಗಾಗಿ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶದ ಘೋಷಣೆಗೆ ತೊಡಕಾಗಿರುವ ಸುತ್ತೋಲೆಯನ್ನು ಈ ಕೂಡಲೇ ಸಾರ್ವಜನಿಕ ಹಿತದೃಷ್ಟಿಯಿಂದ ಹಿಂಪಡೆಯಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸ್ಲಂ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಇಮ್ತಿಯಾಜ ಮಾನ್ವಿ ಮಾಹಿತಿ ನೀಡಿದರು.